ಕೊಮಯತ್ತೂರು: ‘ದಕ್ಷಿಣ ಭಾರತದ ಮ್ಯಾಂಚೆಸ್ಟರ್’ ಕೊಯಮತ್ತೂರು ಲೋಕಸಭಾ ಕ್ಷೇತ್ರದ ಹಣಾಹಣಿ ಈ ಬಾರಿ ಕುತೂಹಲ ಕೆರಳಿಸಿದೆ. ಮಾಜಿ ಸಂಸದ ಸಿ.ಪೊನ್ ರಾಧಾಕೃಷ್ಣನ್ ಇಲ್ಲಿ ಬಿಜೆಪಿಯ ಅಭ್ಯರ್ಥಿ.
2014ರ ಚುನಾವಣೆಯಲ್ಲಿ ಅವರು ಇಲ್ಲಿ 42 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಆಗ ತೃತೀಯ ರಂಗದ ಭಾಗವಾಗಿದ್ದರು. ತಮಿಳುನಾಡಿನ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯಲ್ಲಿ ಯಾವುದೂ ಈ ರಂಗದಲ್ಲಿ ಇರಲಿಲ್ಲ. ಈ ಬಾರಿ ರಾಧಾಕೃಷ್ಣನ್ ಅವರಿಗೆ ಸಿಪಿಎಂನ ಪಿ.ಆರ್.ನಟ ರಾಜನ್ ಅವರೇ ಪ್ರಮುಖ ಎದುರಾಳಿ.
ಕೊಯಮತ್ತೂರು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ಘಟಕಗಳಿಗೆ ಹೆಸರಾಗಿದ್ದ ಊರು. ಆದರೆ, ನೋಟು ರದ್ದತಿ ಮತ್ತು ಜಿಎಸ್ಟಿ ಜಾರಿಯಿಂದಾಗಿ ಈ ರಂಗಕ್ಕೆ ಭಾರಿ ದೊಡ್ಡ ಏಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಇದು ಇಲ್ಲಿ ರಾಧಾಕೃಷ್ಣನ್ ಅವರಿಗೆ ಹಿನ್ನಡೆ ಆಗಬಹುದು.
ರಾಧಾಕೃಷ್ಣನ್ ಅವರು 1998 ಮತ್ತು 1999ರಲ್ಲಿ ಎರಡು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದಾರೆ. ಪ್ರಭಾವಿ ಗೌಂಡರ್ ಸಮುದಾಯದ ಅವರಿಗೆ ಕೆಲಸ ಗಾರ ಎಂಬ ಹೆಸರಿದೆ. ವಿವಿಧ ರೀತಿಯ ಕೈಗಾರಿಕೆಗಳಿರುವ ಕ್ಷೇತ್ರದಲ್ಲಿ ಇದುವೇ ಅವರಿಗೆ ವರದಾನವಾಗಬಹುದು.
ಎಐಎಡಿಎಂಕೆ ಜತೆಗೆ ಈ ಬಾರಿ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಕೊಯಮತ್ತೂರು ಕ್ಷೇತ್ರವನ್ನು ಹೊಂದಿರುವ ಪಶ್ಚಿಮ ತಮಿಳುನಾಡು ಎಐಎಡಿಎಂಕೆ ಗಟ್ಟಿಯಾಗಿ ನೆಲೆಯೂರಿರುವ ಪ್ರದೇಶ.ಕಳೆದ ಬಾರಿ ಸತತ ಎರಡನೇ ಅವಧಿಗೆ ಜಯಲಲಿತಾ ಅವರು ಅಧಿಕಾರಕ್ಕೇರುವಲ್ಲಿ ಈ ಪ್ರದೇಶದ ಕೊಡುಗೆ ಹೆಚ್ಚು. ಬಿಜೆಪಿಗೆ ಕೂಡ ಕೊಯಮತ್ತೂರಿನಲ್ಲಿ ನೆಲೆ ಇದೆ. ಈ ಬಾರಿಯ ಲೋಕಸಭಾ ಚುನಾವಣೆಯನ್ನೇ ಗಮನದಲ್ಲಿ ಇರಿಸಿಕೊಂಡು ಪಕ್ಷ ಇಲ್ಲಿ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಇದರಿಂದಲೂ ಬಿಜೆಪಿಗೆ ಅನುಕೂಲ ಆಗಬಹುದು.