ಬೆಂಗಳೂರು:ಲಕ್ಷ್ಮಿ ವಿಲಾಸ್ ಬ್ಯಾಂಕ್ ಹಲವಾರು ಶಾಖೆ ಮತ್ತು ಎಟಿಎಂಗಳನ್ನು ಮುಚ್ಚಿದೆ ಎಂಬ ವದಂತಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ರೀತಿಯ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಶೇರ್ ಮಾಡಿದ ಫೇಸ್ಬುಕ್ ಪುಟಮತ್ತು ಫೇಸ್ಬುಕ್ ಬಳಕೆದಾರರ ವಿರುದ್ಧ ಬ್ಯಾಂಕ್ ಚೆನ್ನೈ ಸೈಬರ್ ಅಪರಾಧ ದಳಕ್ಕೆ ದೂರು ನೀಡಿದೆ.
ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕ್ಗೆ ಕಠಿಣ ಸ್ವರೂಪದ ಆರ್ಥಿಕ ನಿರ್ಬಂಧ (ಪಿಸಿಎ) ವಿಧಿಸಿತ್ತು. ಅದೇ ವೇಳೆ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಜತೆ ವಿಲೀನವಾಗುವ ಬ್ಯಾಂಕ್ ಪ್ರಸ್ತಾಪವನ್ನು ಆರ್ಬಿಐ ತಿರಸ್ಕರಿಸಿತ್ತು.
ಲಕ್ಷ್ಮಿ ವಿಲಾಸ್ ಬ್ಯಾಂಕ್ನ ಪ್ರಕಟಣೆ ಪ್ರಕಾರ ಫೇಸ್ಬುಕ್ ಖಾತೆದಾರರಾದಲವ್ ದೀಪ್ ಗ್ರೆವಾಲ್ ಮತ್ತು ರಂಜನ್ ಪ್ರಸಾದ್, ಪ್ರಿಯಾಂಕಾ ಗಾಂಧಿ- ಫ್ಯೂಚರ್ ಆಫ್ ಇಂಡಿಯಾ ಎಂಬ ಫೇಸ್ಬುಕ್ ಪುಟ ಈ ರೀತಿಯ ಫೇಕ್ ಪೋಸ್ಟ್ ಶೇರ್ ಮಾಡಿದೆ.
ಫೇಕ್ ಪೋಸ್ಟ್ ಬಗ್ಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ದೂರು ನೀಡಿರುವ ಸುದ್ದಿ ನಿಜವೇ ಎಂದು ಬೂಮ್ ಲೈವ್ ತಂಡ ವಿಚಾರಿಸಿದಾಗ, ಹೌದು ಎಂದು ಬ್ಯಾಂಕ್ ಮೂಲಗಳು ಹೇಳಿವೆ.
ಕೆಲವು ಸಂದೇಶಗಳು ಜನರಲ್ಲಿ ಮತ್ತು ಬ್ಯಾಂಕ್ ಗ್ರಾಹಕರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ. ಆರೋಪಿಗಳು ಪೋಸ್ಟ್ ಮಾಡಿರುವ ಸಂದೇಶಗಳು ಸುಳ್ಳು ಆಗಿದ್ದು ಇದು ನಮ್ಮ ಸಂಸ್ಥೆಯ ಹೆಸರಿಗೆ ಕಳಂಕ ತಂದೊಡ್ಡುವ ಯತ್ನವಾಗಿದೆ ಎಂದು ಬ್ಯಾಂಕ್ ತಮ್ಮ ಪ್ರಕಟಣೆಯಲ್ಲಿ ಹೇಳಿದೆ.