ಅಕ್ಷಯ ಪಾತ್ರೆ ಪ್ರತಿಷ್ಠಾನಕ್ಕೆ ಗಾಂಧಿ ಶಾಂತಿ ಪ್ರಶಸ್ತಿ

ನವದೆಹಲಿ: ಅಕ್ಷಯ ಪಾತ್ರೆ ಪ್ರತಿಷ್ಠಾನ ಮತ್ತು ಸುಲಭ್ ಇಂಟರ್ನ್ಯಾಷನಲ್ ಸಂಸ್ಥೆ 2016ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಗೆ ಪಾತ್ರವಾಗಿವೆ. ನಾಲ್ಕು ವರ್ಷಗಳ ನಂತರ ಕೇಂದ್ರ ಸರ್ಕಾರ ಪ್ರಶಸ್ತಿಗೆ ಪಾತ್ರರಾದವರ ಪಟ್ಟಿಯನ್ನು ಒಟ್ಟಿಗೆ ಪ್ರಕಟಿಸಿದೆ.
ಭಾರತದಾದ್ಯಂತ ಕೋಟ್ಯಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಕಾರಣಕ್ಕೆ ಅಕ್ಷಯ ಪಾತ್ರೆ ಪ್ರತಿಷ್ಠಾನಕ್ಕೆ ಈ ಮನ್ನಣೆ ಸಿಕ್ಕರೆ, ಭಾರತದಾದ್ಯಂತ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಪರಿಸರ ನೈರ್ಮಲ್ಯಕ್ಕೆ ನೆರವಾಗುತ್ತಿರುವ ಸುಲಭ್ ಫೌಂಡೇಷನ್ ಈ ಗೌರವಕ್ಕೆ ಪಾತ್ರವಾಗಿದೆ.
ಗ್ರಾಮೀಣಾಭಿವೃದ್ದಿ, ಶಿಕ್ಷಣ ಮತ್ತು ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ ಕನ್ಯಾಕುಮಾರಿ ವಿವೇಕಾನಂದ ಕೇಂದ್ರಕ್ಕೆ 2015ನೇ ಸಾಲಿನ ಪ್ರಶಸ್ತಿ ಲಭಿಸಿದೆ.
ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳಿಗೆ ಶೈಕ್ಷಣಿಕ ಸೇವೆ ನೀಡುತ್ತಿರುವ, ಗ್ರಾಮೀಣಾಭಿವೃದ್ಧಿ ಮತ್ತು ಸಾಮಾಜಿಕ ಸಮಾನತೆಗೆ ಶ್ರಮಿಸುತ್ತಿರುವ ಏಕಲ್ ಅಭಿಯಾನ ಟ್ರಸ್ಟ್ 2017ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದೆ.
2018ನೇ ಸಾಲಿನ ಪ್ರಶಸ್ತಿಗೆ ಕುಷ್ಠರೋಗ ನಿರ್ಮೂಲನೆಗೆ ಶ್ರಮಿಸುತ್ತಿರುವ ನಿಪ್ಪಾನ್ ಫೌಂಡೇಷನ್ ಅಧ್ಯಕ್ಷ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸೌಹಾರ್ದ ರಾಯಭಾರಿ ಯೋಹೆ ಸಸಕಾವಾ ಅವರು ಪಾತ್ರರಾಗಿದ್ದಾರೆ.
ಪ್ರಶಸ್ತಿ ವಿಜೇತರಿಗೆ ₹1 ಕೋಟಿ, ಪ್ರಶಂಸಾ ಪತ್ರ, ಫಲಕ ಮತ್ತು ಕರಕುಶಲ ವಸ್ತುಗಳನ್ನು ನೀಡಿ ಗೌರವಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ವಿಜೇತರನ್ನು ಆಯ್ಕೆ ಮಾಡಿದೆ. 1995ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಬರಹ ಇಷ್ಟವಾಯಿತೆ?
0
0
0
0
0
0 comments
View All