ಪುಣೆ: ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬಂಧಿತ ಮಾವೋವಾದಿ ನಕ್ಸಲರ ಬಂಧನದ ವೇಳೆ ವಶಪಡಿಸಿಕೊಳ್ಳಲಾದ ಪತ್ರದಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಸಂಖ್ಯೆ ಪತ್ತೆಯಾಗಿದೆ.
ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ ನಕ್ಸಲರ ಜತೆ ನಂಟು ಮತ್ತು ಭೀಮಾ ಕೋರೆಂಗಾವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಐವರು ಹೋರಾಟಗಾರರನ್ನು ಬಂಧಿಸಲಾಗಿತ್ತು. ಈ ವೇಳೆ ಹಲವು ದಾಖಲೆ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
‘ಪತ್ರದಲ್ಲಿರುವ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ವೆಬ್ಸೈಟ್ನಲ್ಲೂ ಲಭ್ಯವಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ದೋಷಾರೋಪ ಪಟ್ಟಿಯಲ್ಲಿ ಪತ್ರ ಕೂಡ ಒಳಗೊಂಡಿದ್ದು, ತನಿಖೆಯ ಹಂತದಲ್ಲಿದೆ. ಈ ಪ್ರಕರಣದಲ್ಲಿ ಅವರ ಪಾತ್ರ ಕಂಡುಬಂದರೆ, ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಪುಣೆಯ ಡಿಸಿಪಿ ಸುಹಾಶ್ ಭಾವ್ಚೆ ತಿಳಿಸಿದ್ದಾರೆ.
ಧೈರ್ಯವಿದ್ದರೆ ಬಂಧಿಸಿ: ತಮ್ಮ ಮೇಲಿನ ಆರೋಪಗಳನ್ನು ದಿಗ್ವಿಜಯ್ಸಿಂಗ್ ಅವರು ತಳ್ಳಿಹಾಕಿದ್ದಾರೆ. ನಾನು ತಪ್ಪಿತಸ್ಥ ಎಂದಾದರೆ, ಕೇಂದ್ರ ಅಥವಾ ರಾಜ್ಯ ಸರ್ಕಾರ ನನ್ನನ್ನು ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ.
ಪತ್ರದಲ್ಲಿ ಏನಿದೆ ?
‘ವಿದ್ಯಾರ್ಥಿಗಳನ್ನು ಬಳಸಿಕೊಂಡು, ದೇಶವ್ಯಾಪಿ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಹೋರಾಟಗಾರರ ವಿರುದ್ಧ ಕ್ರಮ ಕೈಗೊಂಡರೆ, ಸರ್ಕಾರಕ್ಕೂ ಹಿನ್ನಡೆಯಾಗುತ್ತದೆ. ಈ ಹೋರಾಟಕ್ಕೆ ನೆರವಾಗಲು ಕಾಂಗ್ರೆಸ್ ನಾಯಕರು ಒಪ್ಪಿದ್ದಾರೆ’ ಎಂದು 2017ರ ಸೆಪ್ಟೆಂಬರ್ 25ರಂದು ಕಾಮ್ರೇಡ್ ಪ್ರಕಾಶ್ ಅವರು ಸುರೇಂದ್ರ ಎಂಬುವರಿಗೆ ಪತ್ರದಲ್ಲಿ ಉಲ್ಲೇಖವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.