ನವದೆಹಲಿ: ರೈತರ ಸಾಲಮನ್ನಾ ನಿರ್ಧಾರ ಆರ್ಥಿಕ ವ್ಯವಸ್ಥೆಗೆ ಮಾರಕ ಎಂದು ಪ್ರಧಾನ ಮಂತ್ರಿಗಳ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಕ್ಷೇತ್ರ ಇಂದು ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ಸರ್ಕಾರಗಳ ಅವೈಜ್ಞಾನಿಕ ನೀತಿಗಳು ಕಾರಣ. ಸಾಲಮನ್ನಾದಿಂದ ಯಾವ ಪ್ರಯೋಜನವೂ ಇಲ್ಲ ಎಂದು ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಕ್ಷೇತ್ರದ ಬಿಕ್ಕಟ್ಟುಗಳಿಗೆ ಪರಿಹಾರ ಕಂಡು ಹಿಡಿಯುವ ನಿಜವಾದ ಉದ್ದೇಶ ಸರ್ಕಾರಗಳಿಗೆ ಇದ್ದರೆ ಸಾಲಮನ್ನಾದ ಹೊರತಾಗಿ ಬೇರೆ ಮಾರ್ಗಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಆರ್ಬಿಐ ಮೀಸಲು ನಿಧಿಗೆ ಕೊರತೆ ಇಲ್ಲ. ಆದರೆ, ಮೀಸಲು ನಿಧಿಯನ್ನು ಅತ್ಯಂತ ಎಚ್ಚರಿಕೆ ಮತ್ತು ನ್ಯಾಯಯುತವಾಗಿ ಬಳಸಬೇಕು. ಆರ್ಥಿಕ ಕೊರತೆ ಅಥವಾ ವೆಚ್ಚ ಭರಿಸಲು ಈ ನಿಧಿಯನ್ನು ಬಳಸುವುದು ಸರಿಯಲ್ಲ ಎಂದು ಸುಬ್ರಮಣಿಯನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಬ್ಯಾಂಕುಗಳ ‘ವಸೂಲಾಗದ ಸಾಲ ಸಮಸ್ಯೆಗೆ (ಎನ್ಪಿಎ)’ ಪರಿಹಾರ ಕಂಡು ಹಿಡಿಯುವ ಆರ್ಬಿಐ ಕ್ರಮಗಳ ಪರ ಅವರು ಧ್ವನಿ ಎತ್ತಿದ್ದಾರೆ.
ನೋಟು ರದ್ದು ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ ಜಾರಿಯಾದ ನಂತರ ರಫ್ತು ವಹಿವಾಟು ಕುಂಠಿತಗೊಂಡಿದ್ದು ನಿಜ. ಈಗ ಎಲ್ಲವೂ ಸರಿಯಾಗಿದೆ ಎಂದರು.
ಪೆಟ್ರೋಲ್ ಮತ್ತು ಡೀಸೆಲ್ಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದು ಒಳ್ಳೆಯದು. ಆದರೆ, ಇದರಿಂದ ಕೇಂದ್ರ ಮತ್ತು ರಾಜ್ಯಗಳ ವರಮಾನಗಳ ಮೇಲೆ ಪರಿಣಾಮವಾಗುವ ಸಾಧ್ಯತೆ ಇದೆ ಎಂದರು.
* ಮೀಸಲು ನಿಧಿ ಬಳಕೆ ಕುರಿತು ಆರ್ಬಿಐ ಮತ್ತು ಸರ್ಕಾರ ಮುಕ್ತವಾಗಿ ಚರ್ಚಿಸುವುದು ಒಳ್ಳೆಯದು. ಅರವಿಂದ್ ಸುಬ್ರಮಣಿಯನ್, ಆರ್ಥಿಕ ತಜ್ಞ