ಕಾಂಗ್ರೆಸ್ ಪಕ್ಷವು ಅತಿಯಾದ ಅಹಂ ಹೊಂದಿದೆ ಎಂದೂ ಅಖಿಲೇಶ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಪಕ್ಷವು ಕೇಂದ್ರದಲ್ಲಿ ಮತ್ತು 2022ರಲ್ಲಿ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಅಖಿಲೇಶ್ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಬಿಎಸ್ಪಿ ಮತ್ತು ಆರ್ಎಲ್ಡಿ ಜತೆಗೆ ತಮ್ಮ ಮೈತ್ರಿ ಬಹಳ ಬಲಯುತ ಎಂದು ಅಖಿಲೇಶ್ ಬಣ್ಣಿಸಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬುದಕ್ಕಾಗಿಯೇ ಎಸ್ಪಿ ಮತ್ತು ಬಿಎಸ್ಪಿ ಅರ್ಧದಷ್ಟು ಕ್ಷೇತ್ರಗಳನ್ನು ತ್ಯಾಗ ಮಾಡಿವೆ ಎಂದು ಅವರು ಹೇಳಿದ್ದಾರೆ.ಮೇ 23ರಂದು ಫಲಿತಾಂಶ ಪ್ರಕಟವಾದ ಕೂಡಲೇ ಈ ಮೈತ್ರಿಕೂಟ ಬಿರುಕು ಬಿಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೂ ಅಖಿಲೇಶ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘ಈ ವಿಚಾರದಲ್ಲಿ ಬಿಜೆಪಿಯ ಸಮಸ್ಯೆ ಏನು? ಅವರಿಗೆ ಯಾಕೆ ಚಿಂತೆ? ಉತ್ತರ ಪ್ರದೇಶದಲ್ಲಿ ನಾವು ಪ್ರಬಲವಾಗಿದ್ದೇವೆ. ಬಿಜೆಪಿ ಎಲ್ಲಿಯೂ ಇಲ್ಲ. ಅದು ತಳಮಟ್ಟದ ವಾಸ್ತವ. ಮೈತ್ರಿಕೂಟಕ್ಕಿಂತ ಬಿಜೆಪಿ ಬಹಳ ಹಿಂದೆ ಇದೆ’ ಎಂದು ಅಖಿಲೇಶ್ ಹೇಳಿದ್ದಾರೆ.