ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ ಸ್ಪರ್ಧೆಗೆ ಪಕ್ಷ ಸಿದ್ಧ

64ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಕಮಲ್ ಹಾಸನ್
Last Updated 7 ನವೆಂಬರ್ 2018, 19:52 IST
ಅಕ್ಷರ ಗಾತ್ರ

ಚೆನ್ನೈ: ‘ತಮಿಳುನಾಡಿನ 20 ವಿಧಾನಸಭೆ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಮಕ್ಕಳ್‌ ನೀದಿ ಮೈಯಂ (ಎಂಎನ್‌ಎಂ) ಪಕ್ಷ ಸ್ಪರ್ಧಿಸಲು ಸಿದ್ಧವಿದೆ’ ಎಂದು ಪಕ್ಷದ ಸ್ಥಾಪಕ ಹಾಗೂ ನಟ ಕಮಲ್‌ ಹಾಸನ್‌ ಹೇಳಿದ್ದಾರೆ.

ಹಾಸನ್‌ ಅವರು ತಮ್ಮ 64ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಮಾತನಾಡಿ, ‘ಈ ಮೊದಲು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿತ್ತು. ಆ ಸಂದರ್ಭದಲ್ಲಿ ಡಿಎಂಕೆ ನಾಯಕ ಎಂ.ಕರುಣಾನಿಧಿ ಹಾಗೂ ಎಐಎಡಿಎಂಕೆಯ ಎ.ಕೆ.ಬೋಸ್‌ ಅವರ ನಿಧನದಿಂದ ಎರಡು ಕ್ಷೇತ್ರಗಳಲ್ಲಿ ಮಾತ್ರ ಉಪಚುನಾವಣೆ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ 20 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೆ, ನಮ್ಮ ಪಕ್ಷವೂ ಸ್ಪರ್ಧಿಸಲಿದೆ’ ಎಂದರು.

‘ಉಪಚುನಾವಣೆ ಯಾವಾಗ ನಡೆಯಬಹುದು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದರೆ, ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ಬುಧವಾರ ಅವರು ತಿಳಿಸಿದ್ದಾರೆ. ಜೆ.ಜಯಲಲಿತಾ ಅವರ ನಿಧನದಿಂದ ತೆರವಾಗಿದ್ದ ಚೆನ್ನೈನ ಆರ್‌.ಕೆ.ನಗರ ಕ್ಷೇತ್ರದಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಉಪಚುನಾವಣೆ ನಡೆದಿತ್ತು. ವಿ.ಕೆ.ಶಶಿಕಲಾ ಸೋದರ ಸಂಬಂಧಿ ಟಿ.ಟಿ.ವಿ.ದಿನಕರನ್‌ ಅವರು ಈ ಕ್ಷೇತ್ರದಲ್ಲಿ ಜಯಗಳಿಸಿದ್ದರು. ನಂತರ ರಾಜ್ಯದಲ್ಲಿ ಯಾವುದೇ ಉಪಚುನಾವಣೆ ನಡೆದಿಲ್ಲ.

ಆಡಳಿತಾರೂಢ ಪಕ್ಷದ ವಿರುದ್ಧವೇ ಬಂಡಾಯವೆದ್ದು, ಎಎಂಎಂಕೆ ಮುಖಂಡ ಟಿ.ಟಿ.ವಿ.ದಿನಕರನ್‌ಗೆ ನಿಷ್ಠೆ ತೋರಿದ್ದ ಎಐಎಡಿಎಂಕೆಯ 18 ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿತ್ತು. ಈಶಾಸಕರನ್ನು ಅನರ್ಹಗೊಳಿಸಿದ್ದನ್ನು ಮದ್ರಾಸ್‌ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಆದ್ದರಿಂದ ಈಗ ಉಪಚುನಾವಣೆ ಅನಿವಾರ್ಯವಾಗಿದೆ.

ಈ 18 ಕ್ಷೇತ್ರಗಳ ಜೊತೆಗೆ ಕರುಣಾನಿಧಿ ಅವರ ನಿಧನದಿಂದ ತೆರವಾದ ತಿರುವರೂರ್‌ ಮತ್ತು ಬೋಸ್‌ ಅವರು ಪ್ರತಿನಿಧಿಸಿದ್ದತಿರುಪರಾಂಕುಂದ್ರಮ್ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿದೆ. ಚುನಾವಣಾ ಆಯೋಗವು ಉಪ ಚುನಾವಣೆಗೆ ಅಧಿಸೂಚನೆ ಹೊರಡಿಸುವುದು ಬಾಕಿಯಿದೆ. ಎಐಎಡಿಎಂಕೆಯ ಇ.ಪಳನಿಸ್ವಾಮಿ ನೇತೃತ್ವದ ಸರ್ಕಾರಕ್ಕೆ ಇದು ಪರೀಕ್ಷೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

18 ಶಾಸಕರ ಸದಸ್ಯತ್ವ ಅನರ್ಹಗೊಂಡ ನಂತರ, 234 ಶಾಸಕರ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆ ಶಾಸಕರ ಸಂಖ್ಯೆ 116ಕ್ಕೆ ಇಳಿದಿದೆ. ಡಿಎಂಕೆ ಮೈತ್ರಿಕೂಟ 97 ಶಾಸಕರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT