ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗೆ ಮೈತ್ರಿಕೂಟ: ಒಳಗೊಳಗೇ ತಾಕಲಾಟ

ಬಿಜೆಪಿ–ಶಿವಸೇನಾ, ಕಾಂಗ್ರೆಸ್–ಎನ್‌ಸಿಪಿಗೆ ಸವಾಲು ಒಡ್ಡಲಿವೆ ಸಣ್ಣಪುಟ್ಟ ಪಕ್ಷಗಳು
Last Updated 14 ಮಾರ್ಚ್ 2019, 19:24 IST
ಅಕ್ಷರ ಗಾತ್ರ

ಮುಂಬೈ:ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿಯು ಶಿವಸೇನಾ ಜತೆಗೆ ಮತ್ತು ಕಾಂಗ್ರೆಸ್‌ ಎನ್‌ಸಿಪಿ ಜತೆಗೆ ಮೈತ್ರಿ ಮಾಡಿಕೊಂಡಿವೆ. ಆದರೆ ಈ ಎರಡೂ ಮೈತ್ರಿಕೂಟಗಳು ನಮ್ಮನ್ನು ಕಡೆಗಣಿಸಿವೆ ಎಂದು ರಾಜ್ಯದ ಸಣ್ಣ–ಪುಟ್ಟ ಪ್ರಾದೇಶಿಕ ಪಕ್ಷಗಳು ಅಸಮಾಧಾನ ಹೊರಹಾಕಿವೆ.

ಈ ಮೈತ್ರಿಕೂಟಗಳ ವಿರುದ್ಧ ಪ್ರಾದೇಶಿಕ ಪಕ್ಷಗಳು ಹೊಸ ಮೈತ್ರಿಕೂಟವನ್ನು ರಚಿಸಿಕೊಳ್ಳುವ ಸುಳಿವನ್ನು ನೀಡಿವೆ.

‘ಪ್ರಾದೇಶಿಕ ಪಕ್ಷಗಳೆಲ್ಲವೂ ಪರಸ್ಪರ ಸಂಪರ್ಕದಲ್ಲಿವೆ. ಎನ್‌ಡಿಎ ಆಗಲೀ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವೇ ಆಗಲೀ ಈ ಅಸಮಾಧಾನವನ್ನು ಹೇಗೆ ಬಗೆಹರಿಸುತ್ತವೆ ಎಂಬುದನ್ನು ಕಾದು ನೋಡುತ್ತೇವೆ. ನಂತರ ನಮ್ಮ ತಂತ್ರವನ್ನು ರೂಪಿಸುತ್ತೇವೆ’ ಎಂದು ಪ್ರಾದೇಶಿಕ ಪಕ್ಷವೊಂದರ ಮುಖಂಡರು ತಿಳಿಸಿದ್ದಾರೆ.

2014ರ ಚುನಾವಣೆಯಲ್ಲಿ ಈ ಪಕ್ಷಗಳು ಎನ್‌ಡಿಎ ಅಥವಾ ಯುಪಿಎ ಪರವಾಗಿ ಕೆಲಸ ಮಾಡಿದ್ದವು. ಈ ಪಕ್ಷಗಳ ಕೆಲವು ಮುಖಂಡರು ಒಂದೋ ಕೇಂದ್ರ ಸರ್ಕಾರ ಅಥವಾ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿರುವ ಈ ನಾಯಕರು ಮತ್ತು ಅವರ ಪಕ್ಷಗಳನ್ನು ಕಡೆಗಣಿಸುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಮೈತ್ರಿಕೂಟಗಳಿಗೆ ದುಬಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಎನ್‌ಡಿಎ
* ಈ ಹಿಂದೆ ಮತ್ತು ಕೇಂದ್ರದಲ್ಲಿ ಈಗಲೂ ಎನ್‌ಡಿಎಯ ಭಾಗವಾಗಿರುವ ಹಲವು ಪ್ರಾದೇಶಿಕ ಪಕ್ಷಗಳನ್ನು ಈ ಮೈತ್ರಿಯಿಂದ ದೂರವಿಡಲಾಗಿದೆ. ಕೇಂದ್ರದಲ್ಲಿ ಈಗ ಸಚಿವರಾಗಿರುವ ರಾಮದಾಸ್ ಆಠವಲೆ ನೇತೃತ್ವದ ಆರ್‌ಪಿಐಗೆ, ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ್ ಪಕ್ಷ, ರಾಯತ್ ಕ್ರಾಂತಿ ಸಂಘಟನಾ ಮತ್ತು ಶಿವ ಸಂಗ್ರಾಮ ಪ್ರತಿಷ್ಠಾನಗಳಿಗೆ ಯಾವುದೇ ಕ್ಷೇತ್ರವನ್ನು ಬಿಜೆಪಿ ಮತ್ತು ಶಿವಸೇನಾಗಳು ಬಿಟ್ಟುಕೊಟ್ಟಿಲ್ಲ

* ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷದ ಸಂಸ್ಥಾಪಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯರಾಗಿರುವ ನಾರಾಯಣ ರಾಣೆ ಅವರೂ ಎನ್‌ಡಿಎಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸ್ವತಂತ್ರವಾಗಿ 12 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ರಾಣೆ ಘೋಷಿಸಿದ್ದಾರೆ.

*
ಮುಂಬೈನಲ್ಲಿನ ಒಂದು ಕ್ಷೇತ್ರವನ್ನು ಒಳಗೊಂಡಂತೆ ಮೂರು ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡುವಂತೆ ಬಿಜೆಪಿ ಮತ್ತು ಶಿವಸೇನಾಕ್ಕೆ ಬೇಡಿಕೆ ಇಟ್ಟಿದ್ದೆವು. ಈ ಬಗ್ಗೆ ಎರಡೂ ಪಕ್ಷಗಳು ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ

–ರಾಮದಾಸ್ ಆಠವಲೆ,ಆರ್‌ಪಿಐ ಮುಖ್ಯಸ್ಥ ಮತ್ತು ಈಗ ಕೇಂದ್ರ ಸರ್ಕಾರದ ಸಚಿವ

**

ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟ
* ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ನೇತೃತ್ವದ ‘ಭಾರಿಪ ಬಹುಜನ ಮಹಾಸಂಘ’ದ ಜತೆ ಕಾಂಗ್ರೆಸ್ ನಡೆಸಿದ ಮಾತುಕತೆ ವಿಫಲವಾಗಿದೆ. ಇನ್ನೂ ಹಲವು ಪ್ರಾದೇಶಿಕ ಪಕ್ಷಗಳು ಮತ್ತು ಸಂಘಟನೆಗಳನ್ನು ಸೇರಿಸಿಕೊಂಡು ಅವರು ‘ವಂಚಿತ ಬಹುಜನ ಆಘಾಡೀ’ ಎಂಬ ಮೈತ್ರಿಕೂಟವನ್ನು ರಚಿಸಿದ್ದಾರೆ. ಈ ಮೈತ್ರಿಕೂಟದಲ್ಲಿ ಅಸಾದುದ್ದೀನ್ ಒವೈಸಿಯ ಎಐಎಂಐಎಂ ಪಕ್ಷ, ದನಗರ್, ದಲಿತ, ಅಗ್ರಿ ಮತ್ತು ಕೋಲಿ ಸಮುದಾಯದ ಸಂಘಟನೆಗಳು ಸೇರಿವೆ.

2014ರಲ್ಲಿ ಎನ್‌ಡಿಎಯಲ್ಲಿದ್ದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯು ‘ಕೇಂದ್ರ ಸರ್ಕಾರವು ರೈತ ವಿರೋಧಿ’ ಎಂದು ಆರೋಪಿಸಿ ಎನ್‌ಡಿಎಯನ್ನು ತೊರೆದಿತ್ತು. ಈ ಪಕ್ಷವು ಈಗ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಆದರೆ ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್ ಆಗಲೀ, ಎನ್‌ಸಿಪಿ ಆಗಲೀ ಯಾವುದೇ ಭರವಸೆ ನೀಡಿಲ್ಲ.

*

ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆಗಿನ ಮಾತುಕತೆ ವಿಫಲವಾಗಿದೆ. ನಾವು ಇನ್ನೂ ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ. ನಮ್ಮದೇ ಮೈತ್ರಿಕೂಟದಲ್ಲಿ ಚುನಾವಣೆಯನ್ನು ಎದುರಿಸಲಿದ್ದೇವೆ. ನಾವು 48 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದೇವೆ

–ಪ್ರಕಾಶ್ ಅಂಬೇಡ್ಕರ್,ವಂಚಿತ ಬಹುಜನ ಆಘಾಡೀ ಮುಂದಾಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT