ನವದೆಹಲಿ: ಕಾಂಗ್ರೆಸ್ ಪಕ್ಷದ ಮುಖಂಡರು ದೇಶದಾದ್ಯಂತ ಸಂಚರಿಸಿ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿರುವ ವಿಚಾರಗಳನ್ನು ಜನರಿಗೆ ತಲುಪಿಸಲು ಯತ್ನಿಸಲಿದ್ದಾರೆ.
ಹಿರಿಯ ಮುಖಂಡರಾದ ಕಪಿಲ್ ಸಿಬಲ್ ಮತ್ತು ಆನಂದ್ ಮಿಶ್ರಾ ಅವರು ಕ್ರಮವಾಗಿ ಬೆಂಗಳೂರು ಮತ್ತು ಮುಂಬೈಯಲ್ಲಿ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಲಿದ್ದಾರೆ.
ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ಪುಣೆ, ಚಂದ್ರಾಪುರ ಮತ್ತು ವಾರ್ಧಾದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಪ್ರಣಾಳಿಕೆಗೆ ಒತ್ತು ಕೊಟ್ಟು ಮಾತನಾಡುವ ನಿರೀಕ್ಷೆ ಇದೆ.
ಮಧ್ಯಪ್ರದೇಶ, ಛತ್ತೀಸಗಡ ಮತ್ತು ಪುದುಚೇರಿಗಳಲ್ಲಿ ಅಲ್ಲಿನ ಮುಖ್ಯಮಂತ್ರಿಗಳಾದ ಕಮಲ್ನಾಥ್, ಭೂಪೇಶ್ ಬಘೆಲ್ ಮತ್ತು ವಿ. ನಾರಾಯಣಸ್ವಾಮಿ ಅವರಿಗೆ ಪ್ರಣಾಳಿಕೆಯನ್ನು ಜನರಿಗೆ ತಲುಪಿಸುವ ಹೊಣೆ ವಹಿಸಲಾಗಿದೆ. ರಾಜಸ್ಥಾನದಲ್ಲಿ ಅಲ್ಲಿನ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಪ್ರಣಾಳಿಕೆಗೆ ಪ್ರಚಾರ ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ರಜನಿ ಪಾಟೀಲ್, ಶಕ್ತಿಸಿಂಹ ಗೋಹಿಲ್, ರಾಜೀವ್ ಸತಾವ್ ಅವರು ಕ್ರಮವಾಗಿ ಹಿಮಾಚಲ ಪ್ರದೇಶ,ಬಿಹಾರ,ಗುಜರಾತ್ ರಾಜ್ಯಗಳಲ್ಲಿ ಮಾಧ್ಯಮಗೋಷ್ಠಿ ನಡೆಸಿಪ್ರಣಾಳಿಕೆ ಬಗ್ಗೆ ವಿವರ ನೀಡಲಿದ್ದಾರೆ.
ಪಂಜಾಬ್ನ ಹಣಕಾಸು ಸಚಿವ ಮನ್ಪ್ರೀತ್ ಬಾದಲ್ ಅವರು ಗುವಾಹಟಿಯಲ್ಲಿ ಮತ್ತು ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಣಾಳಿಕೆಗೆ ಪ್ರಚಾರ ನೀಡಲಿದ್ದಾರೆ.
ಪ್ರಣಾಳಿಕೆಯನ್ನು ದೇಶದ 22 ಸ್ಥಳಗಳಲ್ಲಿ ಕಾಂಗ್ರೆಸ್ ಮುಖಂಡರು ಗುರುವಾರ ಬಿಡುಗಡೆ ಮಾಡಲಿದ್ದಾರೆ.