ಅಮರಾವತಿ: ಆದಾಯ ತೆರಿಗೆ ಇಲಾಖೆ (ಐಟಿ) ಶೋಧಗಳ ಮೂಲಕ ಕೇಂದ್ರ ಸರ್ಕಾರವು ಟಿಡಿಪಿ ಮುಖಂಡರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇಲ್ಲಿನ ತುಮ್ಮಲಪಲ್ಲಿ ಕಲಾಕ್ಷೇತ್ರದ ಮುಂದಿನ ಅಂಬೇಡ್ಕರ್ ಪ್ರತಿಮೆ ಬಳಿ ಶುಕ್ರವಾರ ಧರಣಿ ನಡೆಸಿದ್ದಾರೆ.
ವೈಎಸ್ಆರ್ಪಿ ನಾಯಕ ಜಗನ್ ಮೋಹನ್ ರೆಡ್ಡಿ ಅವರ ಜತೆಗೆ ಶಾಮೀಲಾಗಿರುವ ಕೇಂದ್ರ ಸರ್ಕಾರವು ಟಿಡಿಪಿ ಮುಖಂಡರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ನಾಯ್ಡು ಆರೋಪಿಸಿದ್ದಾರೆ.
ತಿರುಪತಿ ದೇವಾಲಯ ಮಂಡಳಿಯ ಅಧ್ಯಕ್ಷ ಪುಟ್ಟ ಸುಧಾಕರ ಯಾದವ್ ಅವರ ಮನೆಯಲ್ಲಿ ಶುಕ್ರವಾರ ಎರಡನೇ ಬಾರಿಗೆ ಶೋಧ ನಡೆದಿದೆ. ಪಕ್ಷದ ಸಂಸದ ಸಿ.ಎಂ. ರಮೇಶ್ ಅವರ ಮನೆಯಲ್ಲಿಯೂ ಶೋಧ ನಡೆದಿದೆ. ಈ ಇಬ್ಬರ ಮನೆಗಳೂ ಕಡಪಾದಲ್ಲಿವೆ. ಕಡಪಾ ಜಿಲ್ಲೆಯು ಟಿಡಿಪಿಗೆ ಮಹತ್ವದ್ದಾಗಿದೆ.