ದಾವಣಗೆರೆ: ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ ಅವರಿಗೆ ಮಾಯಕೊಂಡ ಕ್ಷೇತ್ರದ ಟಿಕೆಟ್ ಕೈತಪ್ಪಿದೆ ಎಂದು ಆಕ್ರೋಶಗೊಂಡ ಬೆಂಬಲಿಗರು ಗುರುವಾರ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮನೆ ಎದುರು ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಶಿರಮಗೊಂಡನಹಳ್ಳಿಯ ರಸ್ತೆಯಲ್ಲಿರುವ ರವೀಂದ್ರನಾಥ್ ಅವರ ಮನೆ ಬಳಿ ತೆರಳಿದ ಬೆಂಬಲಿಗರು ವಾಹನಗಳ ಸಂಚಾರ ತಡೆದು ಬಿಜೆಪಿ ಮುಖಂಡರ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್.ಎ. ರವೀಂದ್ರನಾಥ್ ಹಾಗೂ ಮುಖಂಡ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ‘ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ, ಬಸವರಾಜ ನಾಯ್ಕ ಅವರಿಗೇ ಟಿಕೆಟ್ ಕೊಡಿಸಲಾಗುವುದು. ಆತಂಕ ಬೇಡ’ ಎಂದು ಸಮಾಧಾನಪಡಿಸಿದರು.
ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎಂದು ಬಸವರಾಜ್ ನಾಯ್ಕ ಅವರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಕರೆ ಮಾಡಿ ತಿಳಿಸಿದ ಹಿನ್ನೆಲೆಯಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.