ತಿರುವನಂತಪುರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವರದಿಗಳು ಪ್ರಕಟವಾಗಿವೆ. ರಾಹುಲ್ ಅಲ್ಲಿಂದ ಸ್ಪರ್ಧಿಸಿದರೆ ಅವರಿಗೆ ಕಠಿಣ ಸ್ಪರ್ಧೆ ಒಡ್ಡಲು ಬಿಜೆಪಿ ಸಜ್ಜಾಗುತ್ತಿದೆ.
ಕೇರಳದಲ್ಲಿ ಭಾರತ ಧರ್ಮ ಜನ ಸೇನಾ (ಬಿಡಿಜೆಎಸ್) ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಅದರ ಭಾಗವಾಗಿ ವಯನಾಡ್ ಕ್ಷೇತ್ರವನ್ನು ಬಿಡಿಜೆಎಸ್ಗೆ ನೀಡಲಾಗಿದೆ. ರಾಹುಲ್ ಸ್ಪರ್ಧಿಸಿದರೆ ವಯನಾಡ್ ಕ್ಷೇತ್ರವನ್ನು ಬಿಜೆಪಿ ವಾಪಸ್ ಪಡೆದುಕೊಂಡು ಅಲ್ಲಿಂದ ರಾಷ್ಟ್ರ ಮಟ್ಟದ ಮುಖಂಡರೊಬ್ಬರನ್ನು ಕಣಕ್ಕೆ ಇಳಿಸಲಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ಗೆ ಬಿಜೆಪಿಯಷ್ಟೇ ಅಲ್ಲ, ಎಡರಂಗವೂ ಮುಖ್ಯ ಪ್ರತಿಸ್ಪರ್ಧಿ ಎಂಬ ಸಂದೇಶವನ್ನು ರಾಹುಲ್ ಅವರ ಸ್ಪರ್ಧೆಯು ನೀಡಲಿದೆ. ಇದು ಬಿಜೆಪಿಗೆ ನೆರವಾಗಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ಮುಖಂಡ ಎಸ್. ರಾಮಚಂದ್ರನ್ ಪಿಳ್ಳೆ ಹೇಳಿದ್ದಾರೆ.
ಪಿ.ಪಿ.ಸುನೀರ್ ಅವರು ವಯನಾಡ್ನಿಂದ ಸಿಪಿಐ ಅಭ್ಯರ್ಥಿ. ರಾಹುಲ್ ಸ್ಪರ್ಧಿಸಿದರೂ ಸಿಪಿಐ ತನ್ನ ಅಭ್ಯರ್ಥಿಯನ್ನು ಬದಲಾಯಿಸುವ ಸಾಧ್ಯತೆ ಇಲ್ಲ. ರಾಹುಲ್ ಸ್ಪರ್ಧಿಸಲಿದ್ದಾರೆಯೇ ಎಂಬುದು ಸೋಮವಾರ ಖಚಿತವಾಗಲಿದೆ.