ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಗಿದ ದಲಿತೋದ್ಧಾರ

Last Updated 11 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ದಲಿತ ಹಾಗೂ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ‘ಅಹಿಂದ ರಾಜಕಾರಣದಲ್ಲಿ, ಅಲ್ಪಸಂಖ್ಯಾತರು ಮತ್ತು ದಲಿತರ ಹೆಸರು ಹೇಳಿಕೊಂಡು ಹಿಂದುಳಿದವರು ಮೆರೆಯುತ್ತಿದ್ದಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದು ಸ್ವಲ್ಪಮಟ್ಟಿಗೆ ನಿಜ.

ಮೂರೂ ವರ್ಗಗಳು ತಮಗೆ ದಕ್ಕಬೇಕಾದ ಸವಲತ್ತುಗಳನ್ನು ನ್ಯಾಯಯುತವಾಗಿ ದಕ್ಕಿಸಿಕೊಂಡು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರಬೇಕಿತ್ತು. ಆದರೆ, ಒಂದು ನಿರ್ದಿಷ್ಟ ವರ್ಗವು ದಲಿತರನ್ನು ದಬಾಯಿಸಿ ತಾನೇ ಮೆರೆಯುತ್ತಿದೆ. ಸಾಮಾಜಿಕ ನ್ಯಾಯವೆಂಬುದು ಅಪಹಾಸ್ಯಕ್ಕೀಡಾಗಿದೆ.

1932ರ ಪೂನಾ ಒಪ್ಪಂದದಲ್ಲಿ ಡಾ. ಅಂಬೇಡ್ಕರ್‌, ‘ಪ್ರತಿಯೊಂದು ಪ್ರಾಂತ್ಯದಲ್ಲೂ ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪ್ರತ್ಯೇಕವಾಗಿ ಹಣ ಮೀಸಲಿಡಬೇಕು’ ಎಂಬ ಅಂಶವನ್ನು ಸೇರಿಸಿದ್ದರು. ‘ಶೈಕ್ಷಣಿಕ ಪ್ರಗತಿಯಿಲ್ಲದೆ, ತುಳಿತಕ್ಕೊಳಗಾದ ಜನವರ್ಗಗಳು ಏಳಿಗೆಯಾಗಲಾರವು’ ಎಂದು ಅವರು ನಂಬಿದ್ದರು. ಆದರೆ, ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾರಕವಾಗುವ ಕೆಲ ಘಟನೆಗಳು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಘಟಿಸಿವೆ.

ಕೇಂದ್ರ ಸರ್ಕಾರವು ಪೋಸ್ಟ್ ಮೆಟ್ರಿಕ್ ಶಿಕ್ಷಣದಲ್ಲಿರುವ ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತದೆ. ‘ಬಳಕೆದಾರರ ಬೆಲೆ ಸೂಚ್ಯಂಕ’ ಅನುಸರಿಸಿ ಕಾಲಕಾಲಕ್ಕೆ ವಿದ್ಯಾರ್ಥಿವೇತನ ಏರಿಕೆಯಾಗಬೇಕು. ಏಪ್ರಿಲ್ 2003ರಲ್ಲಿ ಏರಿಕೆಯಾದ ವಿದ್ಯಾರ್ಥಿವೇತನವು, 2010ರ ಡಿಸೆಂಬರ್‌ನಲ್ಲಿ ಪರಿಷ್ಕರಣೆಯಾಗಿತ್ತು. ಅದಾಗಿ ಏಳು ವರ್ಷ ಎರಡು ತಿಂಗಳು ಕಳೆದರೂ ಸರ್ಕಾರವು ವಿದ್ಯಾರ್ಥಿವೇತನ ಪರಿಷ್ಕರಣೆ ಮಾಡಿಲ್ಲ. ವಿದ್ಯಾರ್ಥಿವೇತನ ಪಡೆಯಲು ಆದಾಯ ಮಿತಿಯನ್ನು ಆಗಿಂದಾಗ್ಗೆ ಪರಿಷ್ಕರಿಸುವುದು ಕೂಡ ನಡೆದುಬಂದ ರೂಢಿ. ಆದರೆ, ಕೇಂದ್ರ ಸರ್ಕಾರ ನಾಲ್ಕು ವರ್ಷಗಳಿಂದ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿವೇತನ ಏರಿಕೆ ಮತ್ತು ಆದಾಯ ಮಿತಿಯ ಏರಿಕೆಗಾಗಿ ಒತ್ತಾಯಿಸಬೇಕಿದ್ದ, ಪರಿಶಿಷ್ಟ ಸಮುದಾಯಗಳ 131 ಸಂಸದರು ಮೌನವಾಗಿದ್ದಾರೆ.

ರಾಜ್ಯ ಸರ್ಕಾರವು ಬಡ್ತಿ ಮೀಸಲಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್‌ಗೆ ಅಗತ್ಯ ಮಾಹಿತಿಯನ್ನು ನೀಡದಿದ್ದುದರಿಂದ ಪರಿಶಿಷ್ಟ ನೌಕರರಿಗೆ ಹಿನ್ನಡೆಯಾಗಿದೆ. ಹಿಂಬಡ್ತಿಯು ನುಂಗಲಾರದ ತುತ್ತಾಗಿದೆ. ಪರಿಶಿಷ್ಟರ ಜನಸಂಖ್ಯೆಯನ್ನು ಆಧರಿಸಿ ಪರಿಶಿಷ್ಟ ಜಾತಿಯವರಿಗೆ ಶೇ 16 ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 7ರಷ್ಟು ಮೀಸಲಾತಿ ನಿಗದಿಗೊಳಿಸಬೇಕಿತ್ತು. 1989ರಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ‘ಪರಿಶಿಷ್ಟ ಜಾತಿಯವರ ಮೀಸಲಾತಿಯನ್ನು ಶೇ 15 ರಿಂದ ಶೇ 16ಕ್ಕೆ ಏರಿಸಲಾಗುವುದು’ ಎಂದು ಅಂದಿನ ಜನತಾ ಪಕ್ಷದ ಸರ್ಕಾರ ಘೋಷಿಸಿತ್ತು. ಎಲ್ಲರೂ ಅದನ್ನು ಮರೆತಂತಿದೆ. ಮತ್ತೊಂದು ಕಡೆ ಪರಿಶಿಷ್ಟ ಜಾತಿಯವರ ಮೀಸಲಾತಿಯನ್ನು ಹೋಳು ಮಾಡಲು ಹೊರಟಿರುವುದು ದಲಿತೋದ್ಧಾರಕ್ಕೆ ನೆರವಾಗುವುದೇ ಎಂಬ ಜಿಜ್ಞಾಸೆ ಇದೀಗ ಎದ್ದಿದೆ.

ರಾಜ್ಯ ಸರ್ಕಾರದ 1968 ಮತ್ತು 1982ರ ಆದೇಶದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಯಾವುದೇ ಆದಾಯ ಮಿತಿಯಿಲ್ಲದೆ ಸಂಪೂರ್ಣ ಶುಲ್ಕ ವಿನಾಯಿತಿ ಇತ್ತು. ಆದರೆ, 2015 ಮತ್ತು 2016ರ ರಾಜ್ಯಬಜೆಟ್‌ ಘೋಷಣೆಯಲ್ಲಿ ಶುಲ್ಕ ವಿನಾಯಿತಿಗೆ ಕತ್ತರಿ ಹಾಕಲಾಗಿದೆ. ವಾರ್ಷಿಕ ಆದಾಯವು ₹ 2.5 ಲಕ್ಷದಿಂದ ₹10 ಲಕ್ಷದವರೆಗೆ ಇದ್ದಲ್ಲಿ ಶೇ 50 ಶುಲ್ಕ ಪಾವತಿಸುವಂತೆ ಆದೇಶಿಸಲಾಗಿದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಬೇರೊಂದು ನೀತಿ ಅಳವಡಿಸಿ ₹ 10 ಲಕ್ಷವರೆಗೆ ಶೇ 100ರಷ್ಟು ಶುಲ್ಕ ವಿನಾಯಿತಿ ನೀಡಲಾಗಿದೆ. ಇಲ್ಲಿ ಅನೇಕ ವೈರುಧ್ಯಗಳಿವೆ.

ಕೇಂದ್ರ ಸರ್ಕಾರವು ಐಐಟಿ ಮತ್ತು ಎನ್‍ಐಟಿಗಳ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಯಾವುದೇ ಆದಾಯ ಮಿತಿಯಿಲ್ಲದೆ ಶುಲ್ಕ ವಿನಾಯಿತಿ ನೀಡಿರುವುದನ್ನು ರಾಜ್ಯ ಸರ್ಕಾರ ಗಮನಿಸಿ, 1982ರ ರಾಜ್ಯ ಸರ್ಕಾರದ ಆದೇಶವನ್ನು ಮುಂದುವರೆಸಬೇಕಿತ್ತು. ಬದಲಿಗೆ, ರಾಜ್ಯದ ಶಿಕ್ಷಣ ನೀತಿಯು ಪರಿಶಿಷ್ಟರ ಶೈಕ್ಷಣಿಕ ಪ್ರಗತಿಗೆ ಮಾರಕವಾಗಿ ಪರಿಣಮಿಸಿದೆ. ಅಂಬೇಡ್ಕರ್‌ ಕೊಟ್ಟ ‘ಶಿಕ್ಷಣ, ಸಂಘಟನೆ, ಮತ್ತು ಹೋರಾಟ’ ಎಂಬ ಮೂರು ನುಡಿಗಳಲ್ಲಿ, ಶಿಕ್ಷಣಕ್ಕೆ ಭಾರಿ ಹೊಡೆತ ಬಿದ್ದಿದೆ. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯ ₹ 100ಕೋಟಿ ತೆಗೆದಿರಿಸಿದರೆ ಯಾವುದೇ ಆದಾಯ ಮಿತಿಯಿಲ್ಲದೆ ಪರಿಶಿಷ್ಟರಿಗೆ ಶುಲ್ಕ ವಿನಾಯಿತಿ ನೀಡಬಹುದಾಗಿದೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ‘ವಿದ್ಯಾಸಿರಿ’ ಯೋಜನೆಯಲ್ಲಿ ಮಾಸಿಕ ₹ 1,500 ರಂತೆ ಒಂದು ಶೈಕ್ಷಣಿಕ ವರ್ಷಕ್ಕೆ ಹತ್ತು ತಿಂಗಳಿಗೆ ಒಟ್ಟು ₹ 15,000 ಪಡೆಯುತ್ತಾರೆ. ಆದರೆ, ಈ ಯೋಜನೆಯಲ್ಲಿ ಪರಿಶಿಷ್ಟರಿಗೆ ಒಂದು ಚಿಕ್ಕಾಸೂ ಸಿಗದು. ಅವರು ಅದಕ್ಕಿಂತ ಕಡಿಮೆ ಮೊತ್ತವನ್ನು ಭಾರತ ಸರ್ಕಾರದ ವಿದ್ಯಾರ್ಥಿವೇತನವಾಗಿ ಪಡೆಯುತ್ತಾರೆ. ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳು ಶಿಷ್ಯವೇತನವಾಗಿ ಮಾಸಿಕ ₹ 5000 ಪಡೆಯುತ್ತಿದ್ದಾರೆ. ಇದನ್ನು 2018-19ನೇ ಸಾಲಿನ ಬಜೆಟ್‌ನಲ್ಲಿ ₹ 10ಸಾವಿರಕ್ಕೆ ಹೆಚ್ಚಿಸಲಾಗಿದೆ. ಪರಿಶಿಷ್ಟ ಜಾತಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಏಕರೂಪದ ಶಿಷ್ಯವೇತನವಿಲ್ಲ. ಕೆಲ ವಿಶ್ವವಿದ್ಯಾಲಯಗಳಲ್ಲಿ ₹ 4000 ಇದ್ದರೆ, ಕೆಲವೆಡೆ ₹ 8000 ಇದೆ. ಕೆಲವೆಡೆ ಶಿಷ್ಯವೇತನವೇ ಇಲ್ಲ.

2017-18ನೇ ಆರ್ಥಿಕ ವರ್ಷದ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯ ಕ್ರೋಡೀಕೃತ ಅನುದಾನವು ₹ 27ಸಾವಿರ ಕೋಟಿ. ಈ ಅನುದಾನದ ₹940 ಕೋಟಿಯನ್ನು ರೈತರ ಸಾಲಮನ್ನಾಕ್ಕೆ ಬಳಸಲಾಗುತ್ತಿರುವುದು ದುರದೃಷ್ಟಕರ. ಈ ಯೋಜನೆಯ ಕಾಯ್ದೆ 2013ರ ಕಲಂ 13 ರಂತೆ ಅನುದಾನವನ್ನು ಮುಂದಿನ ವರ್ಷಕ್ಕೆ ಕೊಂಡೊಯ್ಯಬಹುದು. ಹೀಗಿರುವಾಗ ಸಾಲಮನ್ನಾಕ್ಕೆ ಈ ಹಣ ಬಳಸುವುದು ಸಮಂಜಸವಲ್ಲ. ಪರಿಶಿಷ್ಟರ ಹಿಂಬಾಕಿ ಹುದ್ದೆಗಳ ಭರ್ತಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಖಾಸಗಿ ರಂಗದಲ್ಲಿ ಮೀಸಲಾತಿ ಕನಸಾಗಿ ಉಳಿದಿದೆ. ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿವೆ. ದಲಿತ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯ ಸ್ವಾಭಿಮಾನದ ಕೋರಿಕೆ ಸಾಕಾರಗೊಳ್ಳುವುದೆಂದೋ? ಜನಸಂಖ್ಯೆಯ ಶೇ 24 ರಷ್ಟಿರುವ ಪರಿಶಿಷ್ಟ ಜನರ ಆಶೋತ್ತರಗಳು ಗರಿಗೆದರಿ ನೆಮ್ಮದಿಯ ಬದುಕು ಸಾಗಿಸುವುದೆಂದೋ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ತಾರತಮ್ಯವನ್ನು ಸರಿಪಡಿಸುವ ದಿಕ್ಕಿನಲ್ಲಿ ಚಿಂತಿಸಿ ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಮಗ್ನರಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT