ಬೆಂಗಳೂರು: ಅಮೋಘ ಆಟ ಆಡಿದ ಮೂಡುಬಿದಿರೆಯ ಆಳ್ವಾಸ್ ಮಹಿಳಾ ತಂಡದವರು ತಮಿಳುನಾಡು ಬಾಲ್ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಹಿಮಾಲಯ ಸ್ಪೋರ್ಟ್ಸ್ ಕ್ಲಬ್ ಸಹ ಯೋಗದ ಆರ್ಮುಗಂ ಸ್ಮಾರಕ ಅಖಿಲ ಭಾರತ ಆಹ್ವಾನಿತ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ತಿರುಪ್ಪುರ್ನ ಚಿನ್ನಸ್ವಾಮಿ ಅಮ್ಮನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾ ಹಣಿಯಲ್ಲಿ ಆಳ್ವಾಸ್ ತಂಡ 35–28, 35–26ರ ನೇರ ಸೆಟ್ಗಳಿಂದ ಚೆನ್ನೈನ ಎಸ್.ಆರ್.ಎಂ. ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿತು.
ಟೂರ್ನಿಯ ಆರಂಭದಿಂದಲೇ ಗುಣ ಮಟ್ಟದ ಆಟ ಆಡಿ ಗಮನ ಸೆಳೆದಿದ್ದ ಆಳ್ವಾಸ್ ವನಿತೆಯರು ಫೈನಲ್ನಲ್ಲೂ ಮೋಡಿ ಮಾಡಿದರು.
ಎಸ್.ಆರ್.ಎಂ. ತಂಡ ಒಡ್ಡಿದ ಪ್ರಬಲ ಪೈಪೋಟಿಯನ್ನು ದಿಟ್ಟತನದಿಂದಲೇ ಮೆಟ್ಟಿದ ಆಳ್ವಾಸ್ ತಂಡ ಮೊದಲ ಸೆಟ್ ಗೆದ್ದು 1–0ರ ಮುನ್ನಡೆ ತಮ್ಮದಾಗಿಸಿಕೊಂಡಿತು.
ಎರಡನೇ ಸೆಟ್ನಲ್ಲಿ ಎಸ್.ಆರ್.ಎಂ. ತಂಡ ತಿರುಗೇಟು ನೀಡಬಹುದು ಎಂದು ಭಾವಿಸಲಾಗಿತ್ತು.
ಆದರೆ ಆಳ್ವಾಸ್ ತಂಡದ ಆಟಗಾರ್ತಿಯರು ಇದಕ್ಕೆ ಅವಕಾಶ ನೀಡಲಿಲ್ಲ. ಚುರುಕಿನ ಸರ್ವ್ ಮತ್ತು ರಿಟರ್ನ್ಗಳ ಮೂಲಕ ಪಾಯಿಂಟ್ಸ್ ಗಳಿಸಿ ಗೆಲುವಿನ ತೋರಣ ಕಟ್ಟಿದರು.
ಟೂರ್ನಿಯಲ್ಲಿ ಒಟ್ಟು 20 ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದವು. ಆಳ್ವಾಸ್ ತಂಡದ ಜಿ.ಜಯಲಕ್ಷ್ಮಿ, ಟೂರ್ನಿಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.