ಗೌರಿಬಿದನೂರು: ಪಟ್ಟಣದ ಹೊರ ವಲಯದ ಇಡಗೂರು ರಸ್ತೆಯಲ್ಲಿರುವ ಹೈಟೆಕ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿಯರು ಗುರುವಾರ ಬೆಳಿಗ್ಗೆ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಏಕಾಏಕಿ ಕಲ್ಲು ಎಸೆದು ಕಾಲೇಜಿನ ಕೊಠಡಿಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದರು.
ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಸರಿಯಾಗಿ ಉಪನ್ಯಾಸಕರ ವ್ಯವಸ್ಥೆ ಮಾಡಿಲ್ಲ. ವ್ಯವಸ್ಥಿತವಾದ ಸೌಲಭ್ಯ ಕಲ್ಪಿಸದೆ ನಮಗೆ ವಂಚಿಸುವ ಮೂಲಕ ನಮ್ಮ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ಮೂರು ವರ್ಷಗಳಿಂದಲೂ ಸಮಸ್ಯೆ ತಲೆದೋರಿದ್ದು, ಅನೇಕ ಬಾರಿ ಕಾಲೇಜಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರೂ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳುತ್ತಿಲ್ಲ. ಡಿಪ್ಲೊಮಾ ತಾಂತ್ರಿಕ ಮಂಡಳಿ ಕಾಲೇಜು ಮುಚ್ಚಿ, ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡುವಂತೆ ಖಡಕ್ ಸೂಚನೆ ನೀಡಿತ್ತು. ಆದರೂ ಆಡಳಿತ ಮಂಡಳಿ ಕಾಲೇಜು ಮುಚ್ಚದೆ ವಿದ್ಯಾರ್ಥಿ ಜೀವನದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುವ ಮುಖಂಡ ಭರತ್ ರೆಡ್ಡಿ ಅವರು ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಸಮಸ್ಯೆಗಳ ಕುರಿತು ಆಡಳಿತ ಮಂಡಳಿಯೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.