ನವದೆಹಲಿ: ಕ್ರಿಕೆಟ್ ಅಂಗಳದಲ್ಲಿ ಚೆಂಡನ್ನು ಮೈದಾನದ ಗಡಿ ತಲುಪಿಸುತ್ತಾ ಅಸಂಖ್ಯ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ್ದ ಎಂ.ಎಸ್.ಧೋನಿ ಈಗ ‘ಗಡಿ’ಯನ್ನು ತಲುಪಿದ್ದಾರೆ. ಅವರದೀಗ ಗಡಿಯಲ್ಲಿ ದೇಶ ಕಾಯುವ ಕಾಯಕ.
ಸೇನಾಪಡೆಯಲ್ಲಿ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಆಗಿರುವ ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ನಿಂದ ಬಿಡುವು ಪಡೆದು ಸೇನಾಪಡೆಯ ಸೇವೆಗೆ ಮುಂದಾಗಿದ್ದಾರೆ. 15 ದಿನಗಳ ಕಾಲ ಅವರು ಕಾಶ್ಮೀರ ಕಣಿವೆಯಲ್ಲಿ ಕೆಲಸ ಮಾಡಲಿದ್ದಾರೆ.
‘ಜುಲೈ 31ರಿಂದ ಆಗಸ್ಟ್ 15ರವರೆಗೂ ಅವರು ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್ನ (ಪ್ಯಾರಾ) ತುಕಡಿಯಲ್ಲಿ ಕಾರ್ಯನಿರ್ವಹಿಸುವರು’ ಎಂದು ಭಾರತೀಯ ಸೇನೆಯು ಖಚಿತಪಡಿಸಿದೆ.
ಅಧಿಕಾರಿಯ (ಧೋನಿ) ಮನವಿಯನ್ನು ಸೇನೆಯ ಕೇಂದ್ರ ಕಚೇರಿ ಮಾನ್ಯ ಮಾಡಿದೆ. ಗಸ್ತು ಕಾಯುವ ಕೆಲಸದಲ್ಲಿ ಅವರು ತೊಡಗುವರು. ತುಕಡಿ ಸಿಬ್ಬಂದಿ ಜತೆಗೆ ವಾಸ್ತವ್ಯ ಹೂಡಲಿದ್ದಾರೆ.