ಮುಂಬೈ: ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರನ್ನು ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡುವಂತೆ ಕೋರಿ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟವು ಸೋಮವಾರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಹೆಸರು ಶೀಫಾರಸು ಮಾಡಿದೆ.
ಠಾಕ್ರೆ ಅವರು ಕಳೆದ ವರ್ಷ ನವೆಂಬರ್ 28ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಸದ್ಯ ಈ ಹುದ್ದೆಯಲ್ಲಿ ಮುಂದುವರಿಯಲು ಅವರು ಇನ್ನೊಂದು ತಿಂಗಳೊಳಗೆ ಶಾಸನ ಸಭೆಯ ಸದಸ್ಯರಾಗಬೇಕಾದ ಅನಿವಾರ್ಯತೆ ಇದೆ. ಪ್ರಸ್ತುತ ಅವರು ರಾಜ್ಯ ವಿಧಾನಸಭೆ ಸದಸ್ಯರಾಗಲಿ, ಪರಿಷತ್ತಿನ ಸದಸ್ಯರಾಗಲಿ ಆಗಿಲ್ಲ.
ಪರಿಷತ್ನ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಠಾಕ್ರೆ ಅವರನ್ನು ನಾಮನಿರ್ದೇಶನ ಮಾಡಲು ಕೋರಿ ಹೆಸರು ಶಿಫಾರಸು ಮಾಡುವ ಸಲುವಾಗಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದಲ್ಲಿ ಸೋಮವಾರ ಮಂತ್ರಿ ಮಂಡಲ ಸಭೆ ನಡೆಯಿತು.
ಇದೇ ಮಾದರಿಯ ಮನವಿಯನ್ನು ಇದೇ ತಿಂಗಳ ಆರಂಭದಲ್ಲಿ ಮಾಡಲಾಗಿತ್ತು. ಅಜಿತ್ ಪವಾರ್ ನೇತೃತ್ವದ ಮಂತ್ರಿ ಮಂಡಲದ ಸಭೆಯಲ್ಲಿ ಠಾಕ್ರೆ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೆ, ರಾಜ್ಯಪಾಲರು ಹೆಸರನ್ನು ತಿರಸ್ಕರಿಸಿದ್ದರು.
ಠಾಕ್ರೆ ಚುನಾವಣೆ ಗೆದ್ದೇ ಶಾಸನಸಭೆ ಪ್ರವೇಶಿಸುವ ಇರಾದೆ ಹೊಂದಿದ್ದರು. ಆದರೆ, ಕೊರೊನಾ ವೈರಸ್ನಿಂದಾಗಿ ದೇಶದ ಎಲ್ಲ ಚುನಾವಣೆಗಳನ್ನು ಮುಂದಕ್ಕೆ ಹಾಕಲಾಗಿದೆ. ಹೀಗಾಗಿ ಠಾಕ್ರೆ ಆಸೆ ಈಡೇರುವ ಲಕ್ಷಣಗಳಿಲ್ಲ.
ಇನ್ನು ಠಾಕ್ರೆ ಅವರನ್ನು ಪರಿಷತ್ಗೆ ನಾಮನಿರ್ದೇಶನ ಮಾಡುವ ಶಿಫಾರಸನ್ನು ತಳ್ಳಿಹಾಕುತ್ತಿರುವ ರಾಜ್ಯಪಾಲರ ನಡೆಯನ್ನು ಆಡಳಿತರೂಢ ಶಿವಸೇನೆ ಟೀಕಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ.