ಚಾಮರಾಜನಗರ: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆ ಮಾಡಬಾರದು ಎಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ತಮಿಳುನಾಡಿನ ಗಡಿಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪುಣುಜನೂರು ಚೆಕ್ಪೋಸ್ಟ್ ಬಳಿ ಸೇರಿದ ಪ್ರತಿಭಟನಾಕಾರರು ತಮಿಳುನಾಡಿನಲ್ಲಿ ಕರ್ನಾಟಕಕ್ಕೆ ಸೇರಿದ ಬಸ್ಗಳ ಮೇಲೆ ನಡೆಯು
ತ್ತಿರುವ ಕಲ್ಲತೂರಾಟ ಖಂಡಿಸಿ ಘೋಷಣೆಗಳನ್ನು ಕೂಗಿದರು. 20ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
‘ಪಟ್ಟ ಕಳೆದುಕೊಳ್ಳಲು ಸಚಿವ ವಿನಯ ಕುಲಕರ್ಣಿ ಕಾರಣ’
ಬೆಳಗಾವಿ: ‘ಸಚಿವ ವಿನಯ ಕುಲಕರ್ಣಿ, 2008ರಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ, ಧಾರವಾಡ ಮುರುಘಾ ಮಠದ ಪೀಠಾಧಿಪತಿ ಸ್ಥಾನ ಕಳೆದುಕೊಳ್ಳುವಂತೆ ಮಾಡಿದರು’ ಎಂದು ಶಿವಯೋಗಿ ಸ್ವಾಮೀಜಿ ಆರೋಪಿಸಿದರು.
ಇಲ್ಲಿನ ಕೆಎಲ್ಇ ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸೆ ಪಡೆಯುತ್ತಿರುವ ಅವರು ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ವಿನಯಗೆ ಮತ ಹಾಕಬೇಡಿ ಎಂದು ನಾನು ಹೇಳಿದ್ದೆ. ಅದಕ್ಕೆ ಪ್ರತಿಯಾಗಿ ನನ್ನ ವಿರುದ್ಧ ಮಠದ ಹೊಲ ಮಾರಿದ ಆರೋಪ ಹೊರಿಸಿದರು. ಹೆಂಡತಿ–ಮಕ್ಕಳಿದ್ದಾರೆ ಎಂದೂ ಆರೋಪ ಮಾಡಿ, ನನ್ನನ್ನು ಮಠದಿಂದ ಹೊರಹಾಕಿಸಿದರು’ ಎಂದು ದೂರಿದರು.
ನೀನಾಸಂ ರಂಗ ತರಬೇತಿ ಶಿಬಿರ: ಅರ್ಜಿ ಆಹ್ವಾನ
ಬೆಂಗಳೂರು: ಕಳೆದ ಎರಡೂವರೆ ದಶಕಗಳಿಂದ ರಂಗತರಬೇತಿ ನಡೆಸುತ್ತಿರುವ ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರವು ಮೇ 15ರಿಂದ ಜೂನ್ 4ರವರೆಗೆ ಮೂರು ವಾರಗಳ ರಂಗ ತರಬೇತಿ ಶಿಬಿರ ನಡೆಸುತ್ತಿದ್ದು, ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
18 ರಿಂದ 35 ವರ್ಷದ ಒಳಗಿನ ಎಸ್ಎಸ್ಎಲ್ಸಿ ವರೆಗೆ ಓದಿದವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ತರಬೇತಿ ನಡೆಸಿಕೊಡಲಿದ್ದು, ರಂಗಮಾಧ್ಯಮದ ಬಗ್ಗೆ ಮಾಹಿತಿಗಳನ್ನು ನೀಡುವ ಜತೆಗೆ ಶಿಬಿರಾರ್ಥಿಗಳಿಗೆ ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ ಎಂದು ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ
ಶಿಬಿರಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ, ಈ ಅವಧಿಯಲ್ಲಿ ಊಟ,ವಸತಿ ವ್ಯವಸ್ಥೆಯ ವೆಚ್ಚವಾಗಿ ಪ್ರತಿಯೊಬ್ಬ ಶಿಬಿರಾರ್ಥಿಯೂ ₹6,000ಗಳನ್ನು ಪಾವತಿಸಬೇಕು. ಶಿಬಿರದಲ್ಲಿ ಪೂರ್ಣಾವಧಿ ಭಾಗವಹಿಸುವುದು ಕಡ್ಡಾಯ.
ಆಸಕ್ತರು ಏಪ್ರಿಲ್ 20ರೊಳಗೆ ಅರ್ಜಿ ಸಲ್ಲಿಸಬಹುದು. ಅಂತರ್ಜಾಲ ತಾಣ www.ninasam.org ದಲ್ಲಿಯೂ ಅರ್ಜಿ ಸಲ್ಲಿಸಬಹುದು. ಸಂಪರ್ಕ ವಿಳಾಸ: ಸಂಚಾಲಕರು, ನೀನಾಸಂ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ– 577417. ದೂರವಾಣಿ ಸಂಖ್ಯೆ 08183–265646. ಮೊಬೈಲ್: ಶ್ರೀಕಾಂತ್– 9880637684
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.