ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿವಸೇನಾ ಮೈತ್ರಿ ಮುರಿದುಬಿದ್ದು, ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾದ ಬಳಿಕ ಪವಾರ್–ಮೋದಿ ಮಧ್ಯೆ ನಡೆಯುತ್ತಿರುವ ಮೊದಲ ಭೇಟಿ ಇದಾಗಿದೆ. ರಾಜ್ಯಸಭೆಯ 250ನೇ ಅಧಿವೇಶನದಲ್ಲಿ ಎನ್ಸಿಪಿಯನ್ನು ಮೋದಿ ಹೊಗಳಿದ್ದೂ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ–ಶಿವಸೇನಾ ಮೈತ್ರಿ ಮುರಿದುಬಿದ್ದ ಬಳಿಕ ಶಿವಸೇನಾಗೆ ಸರ್ಕಾರ ರಚಿಸಲುಕಾಂಗ್ರೆಸ್ ಜತೆ ಸೇರಿಕೊಂಡು ಬೆಂಬಲ ಸೂಚಿಸಲು ಮುಂದಾಗಿದ್ದ ಪವಾರ್ ಸೋಮವಾರ ದಿಢೀರ್ ನಿಲುವು ಬದಲಿಸಿದ್ದರು. ಶಿವಸೇನಾ–ಬಿಜೆಪಿ ದಾರಿ ಅವರು ನೋಡಿಕೊಳ್ಳಲಿ, ಕಾಂಗ್ರೆಸ್–ಎನ್ಸಿಪಿ ತಮ್ಮದೇ ಆದ ರಾಜಕೀಯ ಮಾಡಲಿವೆ ಎಂದು ಹೇಳಿದ್ದರು. ಅದಾದ ಬಳಿಕ ಮತ್ತೆ ಭಿನ್ನ ಹೇಳಿಕೆ ನೀಡಿದ್ದ ಅವರು, ಮಹಾರಾಷ್ಟ್ರ ಸರ್ಕಾರ ರಚನೆ ನಿಟ್ಟಿನಲ್ಲಿ ಇನ್ನಷ್ಟು ಮಾತುಕತೆ ಅಗತ್ಯ. ಹಿರಿಯ ನಾಯಕರ ಬಳಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ. ನಮಗೆ 6 ತಿಂಗಳ ಸಮಯವಿದೆ ಎಂದು ಹೇಳಿದ್ದರು.