ಚಿಕ್ಕಮಗಳೂರು: ಪ್ರಗತಿಪರ ಚಿಂತಕರು ಒಗ್ಗೂಡಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಜನಜಾಗೃತಿ ಜಾಥಾ ರೂಪಿಸಿದ್ದು, ಇದೇ 5ರಂದು ಶಿರಸಿ ಮತ್ತು ಶಿವಮೊಗ್ಗದಲ್ಲಿ ಜಾಥಾ ನಡೆಯಲಿದೆ ಎಂದು ಜಾಥಾ ಸಂಚಾಲಕ ಗೌಸ್ ಮೊಹಿಯುದ್ದೀನ್ ಹೇಳಿದರು.‘5ರಂದು ಬೆಳಿಗ್ಗೆ ಶಿರಸಿಯಲ್ಲಿ ಜಾಥಾ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗದಲ್ಲಿ ನಡೆಯಲಿದೆ. ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ನಟ ಪ್ರಕಾಶ್ ರೈ, ಇಂದೂಧರ ಹೊನ್ನಾಪುರ ಮೊದಲಾದವರು ಭಾಗವಹಿಸುವರು’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕೋಮುವಾದಿ ಬಿಜೆಪಿಯನ್ನು ಸೋಲಿಸುವುದು, ಸಂವಿಧಾನ ವಿರೋಧಿಗಳನ್ನು ಮತ್ತು ಮತಾಂಧರನ್ನು ಸೋಲಿಸುವುದು ಜಾಥಾದ ಉದ್ದೇಶವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಜಾಥಾದ ಅಧ್ಯಕ್ಷರು ಮತ್ತು ಎ.ಕೆ.ಸುಬ್ಬಯ್ಯ ಗೌರವಾಧ್ಯಕ್ಷರಾಗಿದ್ದಾರೆ ಎಂದರು.