ರಾಂಚಿ:ಜಾರ್ಖಂಡ್ನಲ್ಲಿ ಇತ್ತೀಚೆಗೆ ನಡೆದ ಗುಂಪು ಹಲ್ಲೆಯಿಂದಾಗಿ ಮೃತಪಟ್ಟಿದ್ದತಬ್ರೇಜ್ ಅನ್ಸಾರಿಗೆ ಹಲ್ಲೆಕೋರರು ವಿಷ ಕುಡಿಸಿದ್ದರು ಎಂದು ಆತನ ಚಿಕ್ಕಪ್ಪಮೊಹಮ್ಮದ್ ಮನ್ಸೂರ್ ಆರೋಪಿಸಿದ್ದಾರೆ.
’ತಬ್ರೇಜ್ ಮೇಲೆ ಹಲ್ಲೆ ನಡೆಸಿದ ಬಳಿಕ ಆ ಗುಂಪು ಆತನಿಗೆ ವಿಷಕಾರಿ ಎಲೆಯೊಂದರ ರಸ ಮಿಶ್ರಿತ ದ್ರಾವಣ ಕುಡಿಸಿತ್ತು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣವೇ ಚಾರ್ಜ್ಶೀಟ್ ಸಲ್ಲಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಮನ್ಸೂರ್ ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಪ್ರತಿಭಟನೆ:ಘಟನೆ ಖಂಡಿಸಿ ಜಾರ್ಖಂಡ್ನಲ್ಲಿ ಇನ್ನೂ ಪ್ರತಿಭಟನೆ ಮುಂದುವರಿದಿದೆ. ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾ, ರಾಷ್ಟ್ರೀಯ ಜನತಾ ದಳ ಮತ್ತು ಎಡ ಪಕ್ಷಗಳು ರಾಜ್ಯಪಾಲರ ಭವನದ ಮುಂದೆ ಪ್ರತಿಭಟನೆ ನಡೆಸಿವೆ.
ಜೂನ್ 18ರಂದು ಜಾರ್ಖಂಡ್ನ ಖಾರ್ಸಾವಾನ್ನಲ್ಲಿ ತಬ್ರೇಜ್ ಅನ್ಸಾರಿ ಮೇಲೆ ಬೈಕ್ ಕಳವು ಮಾಡಿದ್ದಾರೆ ಎಂಬ ಗುಮಾನಿಯಿಂದ ಗುಂಪೊಂದು ತೀವ್ರ ಹಲ್ಲೆ ನಡೆಸಿತ್ತು. ‘ಜೈ ಶ್ರೀರಾಂ’, ‘ಜೈ ಹನುಮಾನ್’ ಘೋಷಣೆ ಕೂಗುವಂತೆ ಹಲ್ಲೆ ನಡೆಸಿದ ಗುಂಪು ತಬ್ರೇಜ್ ಅವರನ್ನು ಒತ್ತಾಯಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ತಬ್ರೇಜ್ ಘಟನೆ ನಡೆದು ನಾಲ್ಕು ದಿನಗಳ ಬಳಿಕ ಮೃತಪಟ್ಟಿದ್ದರು.
ಬುಧವಾರ ರಾಜ್ಯಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಜಾರ್ಖಂಡ್ನಲ್ಲಿ ನಡೆದ ಗುಂಪು ಹಲ್ಲೆ ಮತ್ತು ಹತ್ಯೆಯಿಂದ ಬೇಸರವಾಗಿದೆ ಎಂದಿದ್ದರು.