ನವದೆಹಲಿ: ಹೆಚ್ಚುವರಿಯಾಗಿ ದಾಸ್ತಾನು ಮಾಡಿದ್ದ ಬೇಳೆಕಾಳುಗಳಲ್ಲಿ 7 ಲಕ್ಷ ಟನ್ ವಿಲೇವಾರಿ ಮಾಡಲಾಗಿದೆ ಎಂದು ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಳೆಯ ದಾಸ್ತಾನು ಖಾಲಿ ಮಾಡಿ ಹೊಸ ಬೆಳೆಯನ್ನು ಸಂಗ್ರಹಿಸಿ ಇಡಲು ಸ್ಥಳಾವಾಕಾಶದ ಅಗತ್ಯ ಇದೆ. ಹೀಗಾಗಿ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ದಾಸ್ತಾನು ಖಾಲಿ ಮಾಡಲು ಆನ್ಲೈನ್ ಮೂಲಕ ಖಾಸಗಿ ವರ್ತಕರು, ಸೇನೆ ಮತ್ತು ಪ್ಯಾರಾಮಿಲಿಟರಿ ಪಡೆ ಹಾಗೂ ಕೇಂದ್ರ ಸರ್ಕಾರದ ಮಧ್ಯಾಹ್ನದ ಬಿಸಿ ಊಟಕ್ಕಾಗಿ ಹರಾಜು ಹಾಕಲಾಗಿದೆ.
ಕಳೆದ ಒಂದು ವರ್ಷದಲ್ಲಿ ಭಾರತೀಯ ಆಹಾರ ನಿಗಮ ಮತ್ತು ಭಾರತೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮತ್ತು ಸಣ್ಣ ರೈತರ ಕೃಷಿ ವ್ಯಾಪಾರ ಸಂಸ್ಥೆ (ಎಸ್ಎಫ್ಎಸಿ) ಮೂಲಕ ಉದ್ದು, ತೊಗರಿ, ಹೆಸರು ಕಡಲೆ ಬೇಳೆಯನ್ನು ಸಂಗ್ರಹಿಸಿ ಇಡಲಾಗಿದೆ.
2015ರ ಅಕ್ಟೋಬರ್ನಲ್ಲಿ ಮೊದಲ ಬಾರಿಗೆ ಬೇಳೆಕಾಳುಗಳ ಹೆಚ್ಚುವರಿ ದಾಸ್ತಾನು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತು. ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಲು ಅವರಿಂದಲೂ ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸಲಾಯಿತು.