ಮುಂಬೈ: ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟೂರ್ನಿಯ ಫೈನಲ್ಗೆ ಪ್ರವೇಶಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಅಫ್ಗಾನಿಸ್ತಾನದ ಯುವ ಸ್ಪಿನ್ನರ್ ರಶೀದ್ ಖಾನ್ ಮೇಲೆ ಅಭಿನಂದನೆಯ ಮಳೆ ಸುರಿದಿದೆ.
ಕೋಲ್ಕತ್ತದ ಈಡನ್ ಗಾರ್ಡನ್ಸ್ನಲ್ಲಿ ಶುಕ್ರವಾರ ರಾತ್ರಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆತಿಥೇಯರನ್ನು 14 ರನ್ಗಳಿಂದ ಸನ್ರೈಸರ್ಸ್ ಸೋಲಿಸಿತ್ತು.
ಸ್ಫೋಟಕ ಬ್ಯಾಟಿಂಗ್ ಮಾಡಿ 10 ಎಸೆತಗಳಲ್ಲಿ 34 ರನ್ ಗಳಿಸಿ ಸನ್ರೈಸರ್ಸ್ 174 ರನ್ ಸೇರಿಸಲು ನೆರವಾಗಿದ್ದರು. ಅಮೋಘ ಬೌಲಿಂಗ್ ಮೂಲಕ ಮಿಂಚಿದ ಅವರು 19 ರನ್ಗಳಿಗೆ ಮೂರು ವಿಕೆಟ್ ಕೂಡ ಕಬಳಿಸಿದ್ದರು. ಒಂದು ರನ್ ಔಟ್ನಲ್ಲೂ ಭಾಗಿಯಾಗಿದ್ದರು. ಎರಡು ಕ್ಯಾಚ್ಗಳನ್ನೂ ಪಡೆದಿದ್ದರು.
ಈ ಸಾಧನೆಗೆ ಮೆಚ್ಚಿದ ಅನೇಕ ಕ್ರಿಕೆಟ್ ಅಭಿಮಾನಿಗಳು ರಶೀದ್ ಅವರಿಗೆ ಭಾರತದ ಪೌರತ್ವ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೋರಿದ್ದಾರೆ. ಇದು ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಪುಳಕಗೊಳಿಸಿದ್ದು ಅಭಿಮಾನದಿಂದ ರಶೀದ್ ಅವರನ್ನು ಕೊಂಡಾಡಿದ್ದಾರೆ.
‘ನಮ್ಮ ದೇಶದ ಆಟಗಾರರಿಗೆ ಅವಕಾಶ ನೀಡಿದ ಭಾರತಕ್ಕೆ ನಾವು ಅಭಾರಿಯಾಗಿದ್ದೇವೆ. ರಶೀದ್ ಅವರಂಥ ಆಟಗಾರರ ಬಗ್ಗೆ ನಮಗೆ ಹೆಮ್ಮೆ ಹಿದೆ’ ಎಂದು ಟ್ವೀಟ್ ಮಾಡಿರುವ ಅವರು ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಮಡಿದವರಿಗೆ ಪ್ರಶಸ್ತಿ ಅರ್ಪಣೆ: ಅಫ್ಗಾನಿಸ್ತಾನದಲ್ಲಿ ಈಚೆಗೆ ಕ್ರಿಕೆಟ್ ಟೂರ್ನಿಯ ವೇಳೆ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರಿಗೆ ರಶೀದ್ ಖಾನ್ ಕಂಬನಿ ಮಿಡಿದಿದ್ದಾರೆ. ಶುಕ್ರವಾರ ತಮಗೆ ಲಭಿಸಿದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮೃತರಿಗೆ ಅರ್ಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.