ಪಟ್ನಾ: ಭಾರತ–ಚೀನಾ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮರಾದರು ಎನ್ನಲಾದಯೋಧರೊಬ್ಬರು, ಬುಧವಾರ ತನ್ನ ಪತ್ನಿಗೆ ಕರೆ ಮಾಡಿ ‘ನಾನಿನ್ನೂ ಬದುಕಿದ್ದೇನೆ’ ಎಂದು ಹೇಳಿದ ಘಟನೆ ಬಿಹಾರದಲ್ಲಿ ನಡೆದಿದೆ.
ಘರ್ಷಣೆಯಲ್ಲಿಬಿಹಾರದ ಸರಣ್ ಜಿಲ್ಲೆಯ ಸೈನಿಕ ಸುನಿಲ್ ರೈ ಹುತಾತ್ಮರಾಗಿದ್ದಾರೆ ಎಂದು ಮಂಗಳವಾರ ಕುಟುಂಬಕ್ಕೆವಿಷಯ ತಿಳಿಸಲಾಗಿತ್ತು. ವಿಷಯ ತಿಳಿದುಸೈನಿಕನ ಕುಟುಂಬವೇ ದುಖಃದ ಮಡುವಿನಲ್ಲಿತ್ತು. ಆದರೆ, ಬುಧವಾರ ದೂರವಾಣಿಯಲ್ಲಿ ಸುನಿಲ್ ಮಾತನ್ನು ಕೇಳಿ, ಕುಟುಂಬ ನಿಟ್ಟುಸಿರುಬಿಟ್ಟಿದೆ.
ಗೊಂದಲಕ್ಕೆ ಕಾರಣವೇನು?: ಗಡಿಯಲ್ಲಿ ನಿಯೋಜನೆಗೊಂಡಿದ್ದ ಸೈನಿಕರ ಪೈಕಿ ಇಬ್ಬರ ಹೆಸರು ಸುನಿಲ್ ರೈ ಎಂದಿತ್ತು. ಜೊತೆಗೆ ಸೈನಿಕರಿಬ್ಬರ ತಂದೆಯ ಹೆಸರೂ ಸುಖ್ದಿಯೊ ರೈ ಎಂದೇ ಆಗಿತ್ತು. ಹುತಾತ್ಮನಾಗಿದ್ದ ಯೋಧ ಸುನಿಲ್ ರೈ ಅವರು ಲಡಾಖ್ನಲ್ಲಿ ನಿಯೋಜನೆಗೊಂಡಿದ್ದರು. ಘರ್ಷಣೆಯಲ್ಲಿ ಇವರು ಮೃತಪಟ್ಟಿದ್ದರು. ಸರಣ್ ಜಿಲ್ಲೆಯ ಸೈನಿಕ ಸುನಿಲ್ ರೈ ಲೇಹ್ನಲ್ಲಿ ನಿಯೋಜನೆಗೊಂಡಿದ್ದರು.ಮಂಗಳವಾರ ಸಂಜೆ ಸರಣ್ ಜಿಲ್ಲೆಯ ಸುನಿಲ್ ರೈ ಪತ್ನಿ ಮೇನಕಾಗೆ ಕರೆ ಮಾಡಿದ್ದ ಸೇನಾ ಅಧಿಕಾರಿಗಳು, ಸುನಿಲ್ ಮೃತಪಟ್ಟಿರುವುದನ್ನು ತಿಳಿಸಿದ್ದರು.
‘ನಾನು ನನ್ನ ಗಂಡನೊಂದಿಗೆ ಮಾತನಾಡಿದ್ದೇನೆ. ದೇವರು ನನಗೆ ಮತ್ತೊಂದು ಜೀವನ ನೀಡಿದ್ದಾರೆ’ ಎಂದು ಮೇನಕಾ ಹೇಳಿದರು.
ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಪೈಕಿ ಮೂವರು ಬಿಹಾರ ಮೂಲದವರಾಗಿದ್ದಾರೆ. ‘ಈ ಸೈನಿಕರ ಪಾರ್ಥಿವ ಶರೀರಗಳನ್ನು ವಿಶೇಷ ವಿಮಾನದ ಮುಖಾಂತರ ತರಲಾಗುವುದು, ಸರ್ಕಾರಿ ಗೌರವದ ಬಳಿಕ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.