ಲಖನೌ: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ದೇಶದಾದ್ಯಂತ ಪಕ್ಷದ ಪರವಾಗಿ ಚುನಾವಣೆ ಪ್ರಚಾರ ಮಾಡಬೇಕಿರುವುದರಿಂದ ಈ ಬಾರಿ ಲೋಕಸಭೆಗೆ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದಾರೆ ಎಂದು ಬಿಎಸ್ಪಿಯ ಹಿರಿಯ ಮುಖಂಡರು ತಿಳಿಸಿದ್ದಾರೆ. ಒಡಿಶಾ ರಾಜ್ಯದ ಭುವನೇಶ್ವರದಲ್ಲಿಏಪ್ರಿಲ್ 2 ರಂದು ಚುನಾವಣಾ ಪ್ರಚಾರಕ್ಕೆ ಮಾಯಾವತಿ ಚಾಲನೆ ನೀಡಲಿದ್ದಾರೆ.
2014ರ ಚುನಾವಣೆಯಲ್ಲಿ ಬಿಎಸ್ಪಿ 503 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೆ ದೇಶದಾದ್ಯಂತ ಬಿಎಸ್ಪಿಯ ಮತಗಳಿಕೆ ಕೇವಲ ಶೇ 5ರಷ್ಟಿತ್ತು.
ಮಾಯಾವತಿ, ಸಮಾಜವಾದಿ ಪಕ್ಷದ ನಾಯಕರ ಜೊತೆ ಸೇರಿ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಮುಲಾಯಂಸಿಂಗ್ ಯಾದವ್, ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಸ್ಪರ್ಧೆ ಮಾಡುವ ಕ್ಷೇತ್ರಗಳಲ್ಲೂ ಮಾಯಾವತಿ ಪ್ರಚಾರ ಮಾಡಲಿದ್ದಾರೆ.