ನವದೆಹಲಿ: ಕಾಂಗ್ರೆಸ್ ಅನ್ನು ಈ ಚುನಾವಣೆಯ ‘ಅಳುಮುಂಜಿ ಪಕ್ಷ’ ಎಂದು ಟೀಕಿಸಿರುವ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ‘ಅಭಿವ್ಯಕ್ತಿ ಸ್ವಾತಂತ್ರ್ಯದ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಹಕ್ಕು ಚುನಾವಣಾ ನೀತಿ ಸಂಹಿತೆಗೆ ಇಲ್ಲ’ ಎಂದಿದ್ದಾರೆ.
‘ತಮ್ಮ ವಿರೋಧಿಗಳು ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ ಎಂದು ಅತಿಯಾಗಿ ಆರೋಪ ಮಾಡುವ ಪರಿಪಾಟವನ್ನು ರಾಜಕೀಯ ಪಕ್ಷಗಳು ಬೆಳೆಸಿಕೊಂಡಿವೆ. ಕಾಂಗ್ರೆಸ್ ಪಕ್ಷವು ಆ ಕೆಲಸವನ್ನು ಮಾಡುತ್ತಿದೆ. ನೀತಿ ಸಂಹಿತೆಯ ಕಾರಣಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ತೆಳುವಾಗಿಸಲು ಸಾಧ್ಯವಿಲ್ಲ ಎಂಬುದನ್ನು ಇಂಥವರು ಅರಿಯಬೇಕು’ ಎಂದು ಜೇಟ್ಲಿ ತಮ್ಮ ಬ್ಲಾಗ್ನಲ್ಲಿ ಬರೆದಿದ್ದಾರೆ.
‘ನಿಮ್ಮ ಮೊದಲ ಮತವನ್ನು ಹುತಾತ್ಮ ಸೈನಿಕರಿಗೆ ಮೀಸಲಿಡಿ’ ಎಂದು ಮೋದಿ ಅವರು ಮೊದಲ ಬಾರಿ ಮತ ಚಲಾವಣೆ ಮಾಡುವವರನ್ನುದ್ದೇಶಿಸಿ ಮಾಡಿದ್ದ ಭಾಷಣವನ್ನು ಉಲ್ಲೇಖಿಸಿದ ಜೇಟ್ಲಿ, ‘ಆ ಭಾಷಣದಲ್ಲಿ ಪ್ರಧಾನಿ ಯಾವ ಪಕ್ಷದ ಹೆಸರನ್ನೂ ಉಲ್ಲೇಖಿಸಿರಲಿಲ್ಲ’ ಎಂದಿದ್ದಾರೆ.