ನವದೆಹಲಿ: ನೆರೆಯ ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರ (ಎಂಎಫ್ಎನ್) ಸ್ಥಾನಮಾನವನ್ನು ಭಾರತ ಶುಕ್ರವಾರ ಹಿಂದಕ್ಕೆ ಪಡೆದಿದೆ.
ಪುಲ್ವಾಮಾದಲ್ಲಿ ಗುರುವಾರ 49 ಸಿಆರ್ಪಿಎಫ್ ಯೋಧರನ್ನು ಬಲಿಪಡೆದ ಆತ್ಮಾಹುತಿ ದಾಳಿಗೆ ಪ್ರತಿಯಾಗಿ ಈ ಕಠಿಣ ನಿರ್ಧಾರ ಕೈಗೊಂಡಿದೆ.
ರಕ್ಷಣಾ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಸಭೆಯ ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಘೋಷಿಸಿದರು.
ಸೀಮಾ ಸುಂಕ ಹೆಚ್ಚಳ, ಬಂದರು ಬಳಕೆ ಮೇಲೆ ನಿರ್ಬಂಧ, ಆಮದು ನಿಷೇಧ ಸೇರಿದಂತೆ ಪಾಕಿಸ್ತಾನದ ವಿರುದ್ಧ ಇನ್ನೂ ಹಲವು ಕಠಿಣ ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದಾರೆ.
ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುವ ಯಾವ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗುವುದು ಮತ್ತು ಯಾವ ವಸ್ತುಗಳ ಮೇಲೆ ಹೆಚ್ಚು ಸೀಮಾ ಸುಂಕ ವಿಧಿಸಲಾಗುವುದು ಎಂಬ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಲಿದೆ.
ಪಾಕ್ನಿಂದ ಆಮದಾಗುವ ವಸ್ತುಗಳು
ಪಾಕಿಸ್ತಾನ ಸದ್ಯ ಭಾರತಕ್ಕೆ ತಾಜಾ ಹಣ್ಣು, ಸಿಮೆಂಟ್, ಪೆಟ್ರೋಲಿಯಂ ಉತ್ಪನ್ನ, ಖನಿಜ ಮತ್ತು ಅದಿರು, ಚರ್ಮ ರಫ್ತು ಮಾಡುತ್ತಿದೆ.
ಪಾಕ್ಗೆ ಭಾರತ ರಫ್ತು ಮಾಡುವ ವಸ್ತುಗಳು
ಭಾರತವು ನೆರೆಯ ರಾಷ್ಟ್ರಕ್ಕೆ ಕಚ್ಚಾ ಹತ್ತಿ, ಹತ್ತಿಯ ನೂಲು, ರಸಾಯನಿಕ ವಸ್ತುಗಳು, ಪ್ಲಾಸ್ಟಿಕ್, ಕೃತಕ ನೂಲು ಮತ್ತು ಬಣ್ಣಗಳನ್ನು ರಫ್ತು ಮಾಡುತ್ತಿದೆ.