ಚಂದ್ರಾಪುರ್: ನದಿಯ ಬಂಡೆಗಳಲ್ಲಿ ಸಿಲುಕಿದ್ದ ಹುಲಿಯೊಂದು ಅಲ್ಲಿಯೇ ಕೊನೆಯುಸಿರೆಳೆದ ಘಟನೆ ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯಲ್ಲಿ ನಡೆದಿದೆ.
ಚಂದ್ರಾಪುರ್ ಜಿಲ್ಲೆಯ ಕುನಾದಾ ಗ್ರಾಮದ ಬಳಿ ಸಿರ್ನಾ ನದಿಯಲ್ಲಿ ಈ ಅವಘಡ ನಡೆದಿದೆ. ಹೆದ್ದಾರಿ ಸೇತುವೆಯಿಂದ 35 ಅಡಿ ಆಳಕ್ಕೆ ಹುಲಿ ಜಿಗಿದಿದ್ದು, ಆ ಸಂದರ್ಭದಲ್ಲಿ ಬಂಡೆಗಳ ಮಧ್ಯೆ ಕಾಲು ಸಿಲುಕಿದೆ.
ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಬೋನು ಇಟ್ಟು ಹುಲಿ ರಕ್ಷಿಸಲು ಯತ್ನಿಸಿದರು. ಆದರೆ, ಹುಲಿ ಬೋನಿ ಪ್ರವೇಶಿಸಲಿಲ್ಲ. ಬೋನು ಎಳೆಯುವ ಯತ್ನದಲ್ಲಿ ಹುಲಿಯ ಹಲ್ಲಿಗೂ ಪೆಟ್ಟಾಗಿದೆ.
ಜಿಗಿದಾಗ ಹುಲಿಯ ಕಾಲು ಸಿಲುಕಿದ್ದು, ಆಗ ಮೂಳೆ ಮುರಿದಿರಬಹುದು. ಗುರುವಾರ ಬೆಳಿಗ್ಗೆ ವೇಳೆಗೆ ಹುಲಿ ಮೃತಪಟ್ಟಿತ್ತು ಎಂದು ಚಂದ್ರಾಪುರ್ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವಿ.ರಾಮರಾವ್ ತಿಳಿಸಿದರು.
ಹುಲಿ ಕಳೇಬರವನ್ನು ನದಿಯಿಂದ ಮೇಲೆ ಎತ್ತಲಾಗಿದೆ. ಮರಣೋತ್ತರ ಪರೀಕ್ಷೆ ನಂತರವೇ ಹುಲಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದರು.