ನಾಗಪುರ: ಎನ್ಸಿಪಿ ಶಾಸಕ ಪ್ರಕಾಶ್ ಗಜಭಿಯೆ ಅವರು ಬಲಪಂಥೀಯ ನಾಯಕ ಸಾಂಭಾಜಿ ಭಿಡೆ ಅವರ ರೀತಿಯಲ್ಲಿ ದಿರಿಸು ಧರಿಸಿ ಮಹಾರಾಷ್ಟ್ರ ವಿಧಾನಭವನದಲ್ಲಿ ಮಾವಿನ ಹಣ್ಣು ಮಾರಾಟ ಮಾಡಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ತಮ್ಮ ತೋಟದ ಮಾವಿನ ಹಣ್ಣುಗಳನ್ನು ತಿಂದಿದ್ದರಿಂದ ಸಂತಾನವಿಲ್ಲದ ದಂಪತಿಗಳಿಗೆ ಮಕ್ಕಳಾಗಿವೆ ಎಂದು ಭಿಡೆ ಈಚೆಗೆ ಹೇಳಿಕೊಂಡಿದ್ದರು. ಇದನ್ನು ಪ್ರತಿಭಟಿಸುವ ಸಲುವಾಗಿ ಗಜಭಿಯೆ ಬುಧವಾರ ಈ ರೀತಿಯ ಕ್ರಮಕ್ಕೆ ಮುಂದಾದರು.
ಆಡಳಿತ ಪಕ್ಷದ ಸಚಿವರು ಮತ್ತು ಶಾಸಕರಿಗೆ ಮಾವಿನ ಹಣ್ಣುಗಳನ್ನು ಮಾರಾಟ ಮಾಡಿದ ಅವರ ಜತೆಗೆ ಪೀಪಲ್ಸ್ ರಿಪಬ್ಲಿಕನ್ ಪಕ್ಷದ ಶಾಸಕರಾದ ವಿದ್ಯಾ ಚವಾನಂದ ಜೋಗೇಂದ್ರ ಕಾವಡೆ ಸಹ ಕೈಜೋಡಿಸಿದರು.
ಭಿಡೆ ಹೇಳಿಕೆ ಕುರಿತು ಸುಧಾರಣಾವಾದಿಗಳು ಹಾಗೂ ವಿರೋಧ ಪಕ್ಷಗಳ ನಾಯಕರಿಂದ ಟೀಕೆ ವ್ಯಕ್ತವಾಗಿತ್ತು.
ತಮ್ಮ ಹೇಳಿಕೆ ಸಾಬೀತುಪಡಿಸುವಂತೆ ಸೂಚಿಸಿ ನಾಸಿಕ್ ಮಹಾನಗರ ಪಾಲಿಕೆ ಭಿಡೆ ಅವರಿಗೆ ಷೋಕಾಸ್ ನೋಟಿಸ್ ನೀಡಿದೆ.
ಶಿವ ಪ್ರತಿಷ್ಠಾನ ಹಿಂದೂಸ್ತಾನ ಸಂಘಟನೆಯ ಮುಖ್ಯಸ್ಥ ಭಿಡೆ, ಈ ವರ್ಷ ಜನವರಿ 1ರಂದು ನಡೆದ ಭೀಮಾ–ಕೋರೆಂಗಾವ್ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.ಭಿಡೆ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಗಜಭಿಯೆ ಆಗ್ರಹಿಸಿದ್ದಾರೆ.
***
ವೇದ ಪಠಿಸಿ...!
ಪಣಜಿ: ರೈತರು ತಮ್ಮ ಗದ್ದೆಗಳಲ್ಲಿ ವೇದ ಮಂತ್ರಗಳನ್ನು ಪಠಿಸಿ ‘ಬ್ರಹ್ಮಾಂಡ ಬೇಸಾಯ’ ತಾಂತ್ರಿಕತೆಯನ್ನು ಅಳವಡಿಸಿಕೊಂಡರೆ, ಭತ್ತದ ಇಳುವರಿ ವೃದ್ಧಿಸುತ್ತದೆ ಎಂದು ಗೋವಾದ ಕೃಷಿ ಸಚಿವ ವಿಜಯ್ ಸರ್ದೇಸಾಯಿ ಹೇಳಿದ್ದಾರೆ.
ಇಂತಹ ಕ್ರಮವನ್ನು ಒಳಗೊಂಡ ‘ಶಿವ್ಯೋಗ್ ಬ್ರಹ್ಮಾಂಡ ಬೇಸಾಯ’ ಯೋಜನೆಯನ್ನು ಬುಧವಾರ ಉದ್ಘಾಟಿಸಿದ ಅವರು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಇಳುವರಿ ಹೆಚ್ಚಿಸುವ ಸಲುವಾಗಿ ‘ಬ್ರಹ್ಮಾಂಡ ಬೇಸಾಯ’ವನ್ನು ಉತ್ತೇಜಿಸುತ್ತದೆ ಎಂದರು.