ಸೋಲನ್ (ಹಿಮಾಚಲ ಪ್ರದೇಶ):‘ನೋಟು ರದ್ದತಿ ಘೋಷಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಚಿವರನ್ನು ಗೃಹ ಬಂಧನದಲ್ಲಿ ಇಟ್ಟಿದ್ದರು’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ನೋಟು ರದ್ಧತಿಯ ವಿಷಯವನ್ನು ಘೋಷಿಸುವ ಮುನ್ನ ಮೋದಿ ಅವರು 7 ರೇಸ್ಕೋರ್ಸ್ ರಸ್ತೆ ನಿವಾಸದಲ್ಲಿ ಸಂಪುಟ ಸಚಿವರನ್ನು ಕೂಡಿ ಹಾಕಿದ್ದರು. ಇದುವೇ ನಿಜ. ನನ್ನ ಭದ್ರತೆಗಾಗಿಯೂ ವಿಶೇಷ ರಕ್ಷಣಾ ತಂಡವನ್ನು ನಿಯೋಜಿಸಿದ್ದರು. ಅವರು ನನಗೆ ಈ ವಿಷಯವನ್ನು ತಿಳಿಸಿದರು’ ಎಂದು ಚುನಾವಣಾ ರ್ಯಾಲಿಯಲ್ಲಿ ತಿಳಿಸಿದರು.
ಬಾಲಕೋಟ್ ವೈಮಾನಿಕ ದಾಳಿ ಕುರಿತು ಮೋದಿ ನೀಡಿದ ಹೇಳಿಕೆಗೆ ವ್ಯಂಗ್ಯ ಮಾಡಿದ ರಾಹುಲ್, ‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದಾರೆ’ ಎಂದರು.
‘ನಮ್ಮ ಪ್ರಧಾನಿಗೆ ಎಷ್ಟು ಜ್ಞಾನವಿದೆ ಎಂದು ನೀವೇ ನೋಡಿ. ನಮ್ಮ ವಾಯುಸೇನಾ ಅಧಿಕಾರಿಗಳಿಗೆ ಭಯಗೊಳ್ಳಬೇಡಿ, ಮೋಡಗಳು ನಮಗೆ ಅನುಕೂಲ ಮಾಡಿಕೊಡುತ್ತವೆ ಎಂದಿದ್ದಾರೆ. ಪ್ರಧಾನಿ ಅವರದ್ದೇ ಲೋಕದಲ್ಲಿ ಜೀವಿಸುತ್ತಿದ್ದಾರೆ. ಜನರ ಮಾತನ್ನು ಕೇಳುತ್ತಿಲ್ಲ’ ಎಂದು ದೂರಿದರು.