ಲಖನೌ:‘ಉಗ್ರರ ನೆಲೆಯ ಮೇಲೆ ವಾಯುಪಡೆ ನಡೆಸಿದ ದಾಳಿಯನ್ನು ವಿರೋಧಪಕ್ಷಗಳು ಉದ್ದೇಶಪೂರ್ವಕವಾಗಿ ಪ್ರಶ್ನಿಸುತ್ತಿವೆ. ಇದರಿಂದ ಪಾಕಿಸ್ತಾನಕ್ಕೆ ನೆರವಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನ್ಪುರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ. ‘ಕೆಲವು ಜನರು ನಮ್ಮ ಸೇನಾಪಡೆಗಳ ಶೌರ್ಯವನ್ನು ಪ್ರಶ್ನಿಸುತ್ತಿದ್ದಾರೆ. ಇಂತಹ ನೀಚ ಕೆಲಸ ಮಾಡುತ್ತಿರುವುದಕ್ಕೆ ಅವರಿಗೆ ನಾಚಿಕೆಯಾಗಬೇಕು’ ಎಂದು ಮೋದಿ ಕಿಡಿಕಾರಿದ್ದಾರೆ.
‘ಉಗ್ರರ ದಾಳಿ ವಿಚಾರದಲ್ಲಿ ಪಾಕಿಸ್ತಾನವು ಭಾರಿ ಇಕ್ಕಟ್ಟಿನಲ್ಲಿ ಸಿಲುಕಿದೆ. ವಿರೋಧ ಪಕ್ಷಗಳ ಈ ಹೇಳಿಕೆಗಳನ್ನು ಬಳಸಿಕೊಂಡು ಪಾಕಿಸ್ತಾನವು ಜಾಗತಿಕ ಸಮುದಾಯದ ಹಾದಿತಪ್ಪಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರಿಗಳು ನಮ್ಮ ಗುರಿಯಲ್ಲ:ಲಖನೌನಲ್ಲಿ ಕಾಶ್ಮೀರಿ ವ್ಯಾಪರಿಗಳ ಮೇಲೆ ನಡೆದ ಹಲ್ಲೆಯನ್ನು ಮೋದಿ ಖಂಡಿಸಿದ್ದಾರೆ.
‘ನಮ್ಮ ಹೋರಾಟ ಉಗ್ರರ ವಿರುದ್ಧವೇ ಹೊರತು, ಕಾಶ್ಮೀರಿ ಜನರ ವಿರುದ್ಧ ಅಲ್ಲ. ಹಲ್ಲೆ ನಡೆಸಿದವರನ್ನು ಬಂಧಿಸುವ ಮೂಲಕ ಯೋಗಿ ಆದಿತ್ಯನಾಥ ಅವರ ಸರ್ಕಾರವು ಒಳ್ಳೆಯ ಕೆಲಸ ಮಾಡಿದೆ’ ಎಂದು ಅವರು ಹೇಳಿದ್ದಾರೆ.