ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸ್ವಕ್ಷೇತ್ರ ದೇಗುಲಗಳ ನಗರಿ ವಾರಾಣಸಿಗೆ ಆಗಮಿಸಿದ್ದು, ಇಲ್ಲಿ 5 ಕಿಲೋಮೀಟರ್ ಬೃಹತ್ ರೋಡ್ ಶೋ ನಡೆಸುವ ಮೂಲಕ ಮತದಾರರಿಗೆ ಧನ್ಯವಾದ ಅರ್ಪಿಸಲಿದ್ದಾರೆ.
ಸೋಮವಾರ ಬೆಳಗ್ಗೆ ವಾರಾಣಸಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ ಸ್ವಾಗತಿಸಿದರು.
#WATCH Varanasi: Prime Minister Narendra Modi offers prayers at the Kashi Vishwanath temple. pic.twitter.com/HbCMaJRqib
— ANI UP (@ANINewsUP) May 27, 2019
ಲೋಕಸಭಾ ಚುನಾವಣೆ ವೇಳೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಮೋದಿ ಆ ಸಮಯದಲ್ಲಿ ಬೃಹತ್ ರೋಡ್ ಶೋ ನಡೆಸಿ ನಂತರ ನಾಮಪತ್ರ ಸಲ್ಲಿಸಿದ್ದರು. ಆ ಸಮಯದಲ್ಲಿ ಹಾದಿಯುದ್ದಕ್ಕೂ ಹೂಗಳನ್ನು ಚೆಲ್ಲಿ ಮೋದಿ ಅವರನ್ನು ಸ್ವಾಗತಿಸಲಾಗಿತ್ತು. ಕಾರ್ಯಕರ್ತರಿಗೆ ಅಂದು ಕಿವಿಮಾತು ಹೇಳಿದ್ದ ಪ್ರಧಾನಿ ನೀವು ಒಬ್ಬೊಬ್ಬರು ಒಬ್ಬೊಬ್ಬ ಮೋದಿ ಎಂದು ಕೊಳ್ಳಿ ಎಂದಿದ್ದರು. ಚುನಾವಣೆ ಪ್ರಚಾರ ಮುಗಿದು ಮತದಾನ ನಡೆದ ನಂತರ 5 ಲಕ್ಷಕ್ಕೂ ಅಧಿಕ ಮತಗಳನ್ನು ನೀಡಿ ಮೋದಿ ಅವರನ್ನು ಆಯ್ಕೆ ಮಾಡಿದರು.
ನಂತರ ದೇಶದಲ್ಲಿ ಬಿಜೆಪಿ 303 ಸ್ಥಾನಗಳಲ್ಲಿ ಜಯಗಳಿಸುವುದರೊಂದಿಗೆ ಎನ್ ಡಿಎ ಮೈತ್ರಿಕೂಟ 352 ಸ್ಥಾನಗಳನ್ನು ಹೊಂದಿ ಬಹುಮತಪಡೆದುಕೊಂಡಿತು.ಎರಡನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದೇ 30ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಮಾಣ ವಚನಕ್ಕೂ ಮುನ್ನ ತನಗೆ ಮತ ನೀಡಿದ ವಾರಾಣಸಿ ಜನತೆಗೆ ಧನ್ಯವಾದ ಅರ್ಪಿಸಲು ತೀರ್ಮಾನಿಸಿರುವ ನರೇಂದ್ರ ಮೋದಿ ಬೆಳಗ್ಗೆಯೇ ಇಲ್ಲಿಗೆ ಬಂದಿಳಿದಿದ್ದಾರೆ. ನಗರದ ದೀನ್ ದಯಾಳ್ ಹಸ್ತಕಲಾ ಸಂಕುಲ್ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಕುರಿತು ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದಷ್ಟು ಬೇಗ ಯೋಜನೆಯನ್ನು ಪೂರ್ಣಗೊಳಿಸುವಂತೆ ತಿಳಿಸಿದ್ದಾರೆ. ಇದಲ್ಲದೆ, ವಾರಾಣಸಿಯಲ್ಲಿ ಯಾವುದೇ ಪ್ರವಾಸಿಗರಿಗೆ ತೊಂದರೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿಮೋದಿ ಸ್ವಾಗತಕ್ಕೆ ಸಕಲ ಸಿದ್ಧಗೊಂಡ ವಾರಾಣಸಿ
ಅಲ್ಲದೆ, ಇಡೀ ನಗರದಲ್ಲಿ ಸ್ವಚ್ಚತೆ ಕಾಪಾಡುವಂತೆ ಸೂಚಿಸಿದ್ದು, ಎಲ್ಲಿಯೂ ಕಸದ ರಾಶಿ ಹಾಕದಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ, ನಗರದ ಎಲ್ಲಾ ರಸ್ತೆಗಳು, ಉದ್ಯಾನವನ, ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.