ನವದೆಹಲಿ:ನೈಋತ್ಯ ಮುಂಗಾರು ಜೂನ್ 4 ರಂದು ಕೇರಳ ಪ್ರವೇಶಿಸುವ ನಿರೀಕ್ಷೆಯಿದೆಎಂದು ಹವಾಮಾನ ಮುನ್ಸೂಚನೆಯ ಖಾಸಗಿ ಸಂಸ್ಥೆ ಸ್ಕೈಮೆಟ್ ಹೇಳಿದೆ.
ಈ ಬಾರಿ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಶೇಕಡ 93ರಷ್ಟು ಮಳೆ ಆಗಲಿದೆ. ಎಲ್ –ನೀನೊ (ಸಮುದ್ರದ ತಾಪಮಾನದಲ್ಲಿ ಅಸಹಜ ಹೆಚ್ಚಳ) ಪರಿಣಾಮದಿಂದ ಮಳೆ ಕಡಿಮೆಯಾಗಲಿದೆ ಎಂದು ಸ್ಕೈಮೆಟ್ ತಿಳಿಸಿದೆ.
ಸಾಮಾನ್ಯವಾಗಿ ಜೂನ್ 1ರಂದು ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗುತ್ತದೆ. ಮೇ 22ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸಲಿದೆ.ನೈಋತ್ಯ ಮುಂಗಾರು ಪ್ರವೇಶ ಎರಡು ಮೂರು ದಿನಹೆಚ್ಚು ಕಡಿಮೆಯಾಗಿದೆ ಎಂದಿದೆ.
ಈ ಋತುಮಾನದಲ್ಲಿ ದೇಶದ ನಾಲ್ಕು ಭಾಗಗಳಲ್ಲಿಯೂ ಮುಂಗಾರು ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ. ವಾಯುವ್ಯ ಮತ್ತು ದಕ್ಷಿಣ ಪರ್ಯಾಯದ್ವೀಪಗಳ ಭಾಗಗಳಿಗೆ ಹೋಲಿಸಿದರೆ, ಪೂರ್ವ ಮತ್ತು ಈಶಾನ್ಯ ಭಾರತ ಮತ್ತು ಕೇಂದ್ರ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗಲಿದೆ.