ಮುಂಬೈ: ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವ್ರಾ ಅವರ ಉಮೇದುವಾರಿಕೆಯನ್ನು ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಬ್ಯಾಂಕರ್ ಉದಯ್ ಕೋಟಕ್ ಅವರು ಬೆಂಬಲಿಸಿದ್ದಾರೆ.
ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ ಸಂಬಂಧ ಸೋದರ ಅನಿಲ್ ಅಂಬಾನಿ ವಿರುದ್ಧ ಕಾಂಗ್ರೆಸ್ ತೀವ್ರ ಟೀಕಾಪ್ರಹಾರ ನಡೆಸುತ್ತಿರುವ ವೇಳೆಯಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಯನ್ನು ಮುಕೇಶ್ ಅಂಬಾನಿ ಬೆಂಬಲಿಸಿದ್ದಾರೆ.
‘ಮಿಲಿಂದ್ ಅವರು ಮುಂಬೈ ದಕ್ಷಿಣಕ್ಕೆ ಸೂಕ್ತ ವ್ಯಕ್ತಿ’ ಎಂದು ಮುಕೇಶ್ ಬಣ್ಣಿಸಿದರೆ, ‘ಮಿಲಿಂದ್ ಅವರು ಮುಂಬೈ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ’ ಎಂದು ಕೋಟಕ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಕುರಿತ ವಿಡಿಯೊವನ್ನು ಮಿಲಿಂದ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂಬಾನಿ, ಕೋಟಕ್ ಹಾಗೂ ಇತರ ಉದ್ಯಮಿಗಳು ನೀಡಿರುವ ಬೆಂಬಲಕ್ಕೆ ಮಿಲಿಂದ್ ಧನ್ಯವಾದ ಹೇಳಿದ್ದಾರೆ. ವ್ಯಾಪಾರ ಸಂಘಟನೆಗಳೂ ಇವರನ್ನು ಬೆಂಬಲಿಸಿವೆ.
‘ಮುಂಬೈನ ಭಾಗವೇ ಆಗಿರುವ ಉದ್ಯಮ ಹಾಗೂ ವ್ಯಾಪಾರವು ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಸತ್ತಿನಲ್ಲಿ ದನಿ ಕಳೆದುಕೊಂಡಿದೆ. ಅಂಬಾನಿ ಅವರಂತಹ ದೊಡ್ಡ ಉದ್ಯಮಿಗಳ ಬೆಂಬಲದಿಂದ ವಿನೀತನಾಗಿದ್ದೇನೆ’ ಎಂದು ದೇವ್ರಾ ಹೇಳಿದ್ದಾರೆ.
ಉದ್ಯೋಗ ಸೃಷ್ಟಿಸಬಲ್ಲ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಇವರ ಎದುರಾಳಿ ಶಿವಸೇನಾ ಅಭ್ಯರ್ಥಿ ಅರವಿಂದ್ ಸಾವಂತ್ 2014ರಲ್ಲಿ ಇಲ್ಲಿಂದ ಗೆದ್ದಿದ್ದರು.