ಮುಂಬೈ: ಅಪರಿಚಿತ ಗುಂಪೊಂದು ಇಲ್ಲಿನಖಾಸಗಿ ಸುದ್ದಿವಾಹಿನಿಯೊಂದರ ಪತ್ರಕರ್ತನ ಮೇಲೆ ಶನಿವಾರ ತಡರಾತ್ರಿ ಹಲ್ಲೆ ನಡೆಸಿದ್ದು, ಮುಖದ ಭಾಗಕ್ಕೆ ತೀವ್ರ ಗಾಯವಾಗಿದೆ.
ಹರ್ಮನ್ ಗೋಮ್ಸ್ ಹಲ್ಲೆಗೊಳಗಾದ ಪತ್ರಕರ್ತ. ಇವರು ಶನಿವಾರ ರಾತ್ರಿ ಕೆಲಸ ಮುಗಿಸಿ ತಮ್ಮ ಸ್ನೇಹಿತನ ಜೊತೆ ಕ್ಯಾಬ್ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಶನಿವಾರ ತಡರಾತ್ರಿ 1.30ರ ವೇಳೆ ಕ್ಯಾಬ್ನಲ್ಲಿ ಗಾಮದೇವಿ ಬಳಿ ಇರುವ ಮನೆಯ ಹತ್ತಿರ ಬಂದಾಗ ಗೋಮ್ಸ್ಗಾಗಿ 4 ರಿಂದ 6 ಮಂದಿ ಕಾಯುತ್ತಿದ್ದರು. ಬಳಿಕ ಅವರನ್ನು ಹೀಗಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಡಿಸಿಪಿ ಧ್ಯಾನೇಶ್ವರ ಚವ್ಹಾಣ್ ತಿಳಿಸಿದ್ದಾರೆ.
ಈ ದಾಳಿಯ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ. ತನಿಖೆ ಕೈಗೊಂಡಿದ್ದೇವೆಎಂದು ಪೊಲೀಸರು ತಿಳಿಸಿದ್ದಾರೆ.
ಗಾಮದೇವಿ ಪೊಲೀಸರು ತಡವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಮುಂಬೈ ಪತ್ರಕರ್ತರ ಸಂಘ, ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಡ ಹೇರಿದೆ. ತಡವಾಗಿ ದೂರು ದಾಖಲಿಸಿರುವ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಳಿ ಮನವಿ ಮಾಡಿದೆ.
ಈ ದಾಳಿಯನ್ನು ಖಂಡಿಸಿರುವ ಮುಂಬೈ ಪ್ರೆಸ್ ಕ್ಲಬ್, ಇದೊಂದು ದೌರ್ಜನ್ಯದ ಪ್ರತೀಕ ಎಂದಿದ್ದಾರೆ.