ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಸತ್ಯಜಿತ್ ಬಿಸ್ವಾಸ್ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನೇತಾರ ಮುಕುಲ್ ರಾಯ್ ಮತ್ತು ಮೂವರು ವ್ಯಕ್ತಿಗಳ ವಿರುದ್ಧ ಭಾನುವಾರ ಎಫ್ಐಆರ್ ದಾಖಲಾಗಿದೆ.
ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಕೃಷ್ಣಗಂಜ್ನಲ್ಲಿ ಶನಿವಾರ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಸತ್ಯಜಿತ್ ಬಿಸ್ವಾಸ್ ಅವರನ್ನುಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯ ಹನ್ಸ್ಕಾಳಿ ಪೊಲೀಸ್ ಠಾಣೆ ವ್ಯಾಪ್ತಿಯ ಫೂಲ್ಬರಿಯ ಸರಸ್ವತಿ ಪೂಜಾ ಮಾರ್ಕ್ನಲ್ಲಿ ಪಕ್ಷದ ಕಾರ್ಯಕರ್ತರ ಜತೆಗೆ ಇದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಇಬ್ಬರು ಆಗಂತುಕರು ಗುಂಡು ಹಾರಿಸಿದ್ದಾರೆ. ಶಾಸಕರು ವೇದಿಕೆ ಮೇಲೆ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗೆ ಅವರು ಕೊನೆ ಉಸಿರೆಳೆದಿದ್ದರು.
ರಾಜ್ಯ ಸಚಿವ ರತ್ನ ಘೋಷ್ ಮತ್ತು ನಾದಿಯಾ ತೃಣಮೂಲ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೌರಿಶಂಕರ್ ದತ್ತಾ ಅವರುಈ ಘಟನೆಯಲ್ಲಿ ಅದೃಷ್ಟವಶಾತ್ ಪಾರಾಗಿದ್ದರು.ಶನಿವಾರ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಜೆಪಿ ಮತ್ತು ಮುಕುಲ್ ರಾಯ್ ಅವರ ಬೆಂಬಲಿಗರು ಬಿಸ್ವಾಸ್ಅವರ ಹತ್ಯೆ ಮಾಡಿದ್ದಾರೆ ಎಂದು ಗೌರಿ ಶಂಕರ್ ದತ್ತಾ ಆರೋಪಿಸಿದ್ದರು.
ಮತುವಾ ಸಮುದಾಯದಲ್ಲಿ ಸತ್ಯಜಿತ್ ಬಿಸ್ವಾಸ್ ಜನಪ್ರಿಯ ರಾಜಕಾರಣಿಯಾಗಿದ್ದರು.ಇಲ್ಲಿ ಬಿಜೆಪಿ ತಮ್ಮ ಅಧಿಪತ್ಯ ಸ್ಥಾಪಿಸಲು ಯತ್ನಿಸುತ್ತಿತ್ತು. ಇತ್ತೀಚೆಗೆ ಅವರು ಬಂಗೋನ್ ಲೋಕಸಭಾ ಕ್ಷೇತ್ರದಲ್ಲಿ ಭಾಷಣ ಮಾಡಲು ಪ್ರಧಾನಿ ನರೇಂದ್ರ ಮೋದಿಯನ್ನು ಕರೆ ತಂದಿದ್ದರು.ಮತಕ್ಕಾಗಿ ಬಿಜೆಪಿ ಜನರನ್ನು ಮೋಸ ಮಾಡುತ್ತಿದೆ ಎಂದು ಸತ್ಯಜಿತ್ ಜನರಿಗೆ ಹೇಳಿದ್ದರು.ಸತ್ಯಜಿತ್ ಅವರ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಬಿಜೆಪಿ ಅವರನ್ನು ಮುಗಿಸಿದೆ ಎಂದು ದತ್ತಾ ಆರೋಪ ಮಾಡಿದ್ದಾರೆ.
ಆದಾಗ್ಯೂ, ಈ ಆರೋಪಗಳನ್ನು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ನಿರಾಕರಿಸಿದ್ದಾರೆ.ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶೀಘ್ರವೇ ಪತ್ತೆ ಹಚ್ಚಬೇಕು ಎಂದು ಘೋಷ್ ಒತ್ತಾಯಿಸಿದ್ದರು.
ಈ ಬಗ್ಗೆ ಸಿಎನ್ಎನ್- ನ್ಯೂಸ್ 18 ಜತೆ ಫೋನ್ನಲ್ಲಿ ಮಾತನಾಡಿದ ದಿಲೀಪ್ ಘೋಷ್, ಬಿಜೆಪಿಗೆ ಪಶ್ಚಿಮ ಬಂಗಾಳದ ಪೊಲೀಸರ ಮೇಲ ನಂಬಿಕೆ ಇಲ್ಲ. ಹಾಗಾಗಿ ವಿಶ್ವಾಸ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದಿದ್ದಾರೆ.
ಇದೀಗ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಸಿಐಡಿ ಅಧಿಕಾರಿಗಳ ತಂಡ ನಾದಿಯಾಗೆ ಬಂದಿದ್ದೆ.
ಟಿಎಂಸಿ ಶಾಸಕ ಸತ್ಯಜಿತ್ ಬಿಸ್ವಾಸ್ ಅವರ ಹತ್ಯೆಗೆ ನಾವು ಸಂತಾಪ ಸೂಚಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಂಗಾಳದ ಬಿಜೆಪಿ ಟ್ವೀಟಿಸಿತ್ತು.
We offer our deepest condolences to the family and friends of TMC MLA Satyajit Biswas who was murdered in tragic circumstances.
— BJP Bengal (@BJP4Bengal) February 9, 2019
Culprits should be brought to justice.
41 ವರ್ಷದ ಸತ್ಯಜಿತ್ ಬಿಸ್ವಾಸ್ ಜನಪ್ರಿಯ ನಾಯಕರಾಗಿದ್ದು, ಇತ್ತೀಚೆಗೆ ವಿವಾಹಿತರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.