ಚೆನ್ನೈ: ತಮಿಳುನಾಡಿನ ರಾಜ್ಯಪಾಲರ ವಿರುದ್ಧದ ಲೇಖನಕ್ಕೆ ಸಂಬಂಧಿಸಿ ಮಂಗಳವಾರ ಬೆಳಿಗ್ಗೆ ಬಂಧಿತರಾಗಿದ್ದ ನಕ್ಕೀರನ್ ತಮಿಳು ಪಾಕ್ಷಿಕ ಪತ್ರಿಕೆ ಸಂಪಾದಕ ಆರ್.ಆರ್. ಗೋಪಾಲ್ ಅವರನ್ನು ನ್ಯಾಯಾಲಯ ಸಂಜೆಯೇ ಬಿಡುಗಡೆ ಮಾಡಿದೆ.
ಏಪ್ರಿಲ್ನಲ್ಲಿ ಬೆಳಕಿಗೆ ಬಂದ ಖಾಸಗಿ ಕಾಲೇಜಿನ ಅಧ್ಯಾಪಕಿಯೊಬ್ಬರ ಲೈಂಗಿಕ ಹಗರಣದ ಸರಣಿ ಲೇಖನದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮತ್ತು ರಾಜಭವನದ ಅಧಿಕಾರಿಗಳ ಹೆಸರನ್ನು ಗೋಪಾಲ್ ಪ್ರಸ್ತಾಪಿಸಿದ್ದರು.
ರಾಜಭವನ ನೀಡಿದ ದೂರಿನ ಮೇರೆಗೆ ಪೊಲೀಸರು ಮಂಗಳವಾರ ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಕ್ಕೀರನ್ ಗೋಪಾಲ್ ಅವರನ್ನು ವಶಕ್ಕೆ ಪಡೆದರು. ಅವರು ಪುಣೆಗೆ ಹೊರಟಿದ್ದರು.
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 124ರ ಅಡಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಷ್ಟ್ರಪತಿ ಅಥವಾ ರಾಜ್ಯಪಾಲರ ಕರ್ತವ್ಯ ನಿರ್ವಹಣೆ, ಅಧಿಕಾರ ಚಲಾವಣೆಗೆ ಅಡ್ಡಿಪಡಿಸುವ ಆರೋಪ ಇದಾಗಿದೆ.