ನವದೆಹಲಿ: ನಾನು ಈ ಬಾರಿ ಚುನಾವಣೆಯಲ್ಲಿಜನತಾ ಜನಾರ್ದನನನ್ನು ಈಶ್ವರನ ರೂಪದಲ್ಲಿ ನೋಡಿದೆ.ಇಡೀ ದೇಶದ ಜನರಲ್ಲಿ ಮಾತೃಶಕ್ತಿಯನ್ನು ನೋಡಿದೆ ಎಂದು ನರೇಂದ್ರ ಮೋದಿ ಈ ಬಾರಿಯ ಗೆಲುವನ್ನು ವ್ಯಾಖ್ಯಾನಿಸಿದ್ದಾರೆ.
ಎನ್ಡಿಎ ಮೈತ್ರಿಕೂಟದ ಸಂಸದೀಯ ಮಂಡಳಿ ನಾಯಕನಾಗಿ ಮೊದಲ ಭಾಷಣ ಮಾಡಿದಅವರು,ರಾಷ್ಟ್ರದ ಜನತೆಯ ಭಾವನೆಗಳಿಗೆ ಯಾವುದೇ ಧಕ್ಕೆ ತರದ ರೀತಿಯಲ್ಲಿ ಅಧಿಕಾರ ನಡೆಸುತ್ತೇವೆ. ದೇಶದ ಜನಸದ್ಭಾವನೆಯಿಂದ ನಮಗೆ ಮತ ನೀಡಿದ್ದಾರೆ. ದೇಶದ ಮತದಾರರಿಗೆ ನನ್ನಧನ್ಯವಾದ ಹೇಳುತ್ತೇನೆ ಎಂದು ನರೇಂದ್ರಮೋದಿ ಹೇಳಿದ್ದಾರೆ.
ಭಾಷಣಕ್ಕೂ ಮುನ್ನ ಭಾರತದ ಸಂವಿಧಾನಕ್ಕೆ ಶಿರಬಾಗಿ ನಮಸ್ಕರಿಸಿದ ನರೇಂದ್ರ ಮೋದಿ, ನಂತರ ಬಿಜೆಪಿ ಪ್ರಮುಖರು ಹಾಗೂ ಎನ್ ಡಿಎ ಮೈತ್ರಿಕೂಟ ಪಕ್ಷಗಳ ಸಂಸದರಿಗೆ ಧನ್ಯವಾದ ಅರ್ಪಿಸಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ,ನಮ್ಮ ಬಳಿ ಎರಡು ಗುರಿಗಳಿವೆ, ಒಂದು ಸ್ಥಳೀಯ ಅಗತ್ಯತೆ, ಮತ್ತೊಂದು ರಾಷ್ಟ್ರೀಯ ಅಭಿವೃದ್ಧಿ, ಈ ಎರಡೂ ಹಳಿಗಳಿದ್ದಂತೆ. ಅವುಗಳನ್ನು ಸಮಾನಾಂತರವಾಗಿಯೇ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದರು. ಈ ಚುನಾವಣೆ ಕೇವಲ ಚುನಾವಣೆಯಾಗಿರಲಿಲ್ಲ. ಇಡೀ ಭಾರತದ ಜನರ ಹೃದಯಗಳನ್ನು ಬೆಸೆಯುವ ಚುನಾವಣೆಯಾಗಿತ್ತು. ಈ ಬಾರಿಯ ಚುನಾವಣೆ ದೇಶದ ರಾಜಕಾರಣದಲ್ಲಿ ಒಂದು ಹೊಸ ಬದಲಾವಣೆ ತಂದಿದೆ.
ನಾನು ಜನರ ಬಳಿ ಮತ ಕೇಳಲು ಹೋಗುತ್ತಿರಲಿಲ್ಲ. ಧನ್ಯವಾದ ಅರ್ಪಿಸಲು ಹೋಗುತ್ತಿದ್ದೆ. ಇಡೀ ದೇಶದ ಜನರು ನಾವು ಹೇಳಿದಂತೆ ಕೇಳಿದರು. ಗ್ಯಾಸ್ ಸಬ್ಸಿಡಿ ಬಿಡಿ ಅಂದಾಗ ಸಬ್ಸಿಡಿ ಬಿಟ್ಟರು. 2019ರ ಚುನಾವಣೆಯಲ್ಲಿ ಏನಾದರೂ ಒಳ್ಳೆಯಕೆಲಸ ಆಗಬೇಕೆಂದುಮತ ನೀಡಿದ್ದಾರೆ. ಯಾಕೆಂದರೆ, 2014ರಿಂದ 2019ರವರೆಗೆ ಆ ರೀತಿಯ ಅಧಿಕಾರ ನಡೆಸಿದ್ದೇವೆ.
2014ರಲ್ಲಿ ನೀಡಿದ ಮತಕ್ಕಿಂತ ಈ ಬಾರಿಯ ಮತದಾನದ ಪ್ರಮಾಣ ಶೇ.25 ರಷ್ಟು ಹೆಚ್ಚಾಗಿದೆ. ಕಳೆದ ಎಲ್ಲಾ ಚುನಾವಣೆಗಳಲ್ಲಿ ಮಹಿಳಾ ಮತದಾರರು ಮತದಾನ ಮಾಡಿದಪ್ರಮಾಣ ಕಡಿಮೆ ಇರುತ್ತಿತ್ತು. ಈ ಬಾರಿ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗೆ ಸರಿಸಮನಾಗಿ ಇದೆ.
ಮಹಾಘಟಬಂಧನ್ ಅಂದರೆ ಅದು ಸುಲಭದ ಆಟವಲ್ಲ. ಬಹು ಕಷ್ಟಕರವಾದದ್ದು, ಅದನ್ನು ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಅದನ್ನು ನಾವು ಮುಂದುವರಿಸಿಕೊಂಡು ಹೋಗುತ್ತೇವೆ. ಮಿತ್ರಪಕ್ಷಗಳು ಇದಕ್ಕೆ ಸಹಕಾರ ನೀಡುತ್ತವೆ. ಎನ್ ಡಿಎ ಎಂದರೆ ಒಂದು ಎನರ್ಜಿ (ಶಕ್ತಿ)ಇದ್ದಂತೆ ಎಂದರು.
ಇದು ದೆಹಲಿಯ ಜೀವನ, ಜನರು ಈಗ ಬನ್ನಿ ಬನ್ನಿ ಅಂತ ಕರೆಯುತ್ತಾರೆ, ತುಂಬಾ ಮಾತನಾಡಿಸುತ್ತಾರೆ.ಇವುಗಳ ಮಧ್ಯೆ ಸೇವಾ ಮನೋಭಾವ ಇಟ್ಟುಕೊಂಡು ಬರುವವರನ್ನು ಮರೆಯಬೇಡಿ ಎಂದು ಸಂಸದರಿಗೆ ಕಿವಿಮಾತು ಹೇಳಿ ಮಾತು ಮುಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.