ನವದೆಹಲಿ/ ಹೈದರಾಬಾದ್: ‘ಫೋನಿ’ ಚಂಡಮಾರುತ ಗುರುವಾರದ ಹೊತ್ತಿಗೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಒಡಿಶಾ ಕರಾವಳಿ ಪ್ರದೇಶಕ್ಕೆ ಶುಕ್ರವಾರ ಮಧ್ಯಾಹ್ನ ‘ಫೋನಿ’ ಪ್ರವೇಶಿಸಲಿದೆ. ಬೆಂಗಾಳ ಕೊಲ್ಲಿಯ ಆಗ್ನೇಯ ಮತ್ತು ನೈರುತ್ಯ ಪ್ರದೇಶದವರೆಗೆ ವ್ಯಾಪ್ತಿಸಿರುವ ಈ ಚಂಡಮಾರುತ ಮೇ 1ರ ವೇಳೆಗೆ ವಾಯುವ್ಯ ಪ್ರದೇಶಕ್ಕೆ ತಲುಪುವ ನಿರೀಕ್ಷೆ ಇದೆ. ಪ್ರತಿ ಗಂಟೆಗೆ 180ರಿಂದ 200 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ಕರಾವಳಿ ಪಡೆ ಯಾವುದೇ ರೀತಿಯ ಗಂಭೀರ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿವೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಕೇರಳ ಮತ್ತು ತಮಿಳುನಾಡಿನ ಉತ್ತರ ಕರಾವಳಿ ಹಾಗೂ ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಪ್ರದೇಶದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು. ಆಂಧ್ರಪ್ರದೇಶದ ಉತ್ತರ ಕರಾವಳಿ ಪ್ರದೇಶದಲ್ಲಿ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಒಡಿಶಾದ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಸನ್ನದ್ಧ ಸ್ಥಿತಿಯಲ್ಲಿ ನೌಕಾಪಡೆ ಚಂಡಮಾರುತದ ತೀವ್ರಗೊಳ್ಳುತ್ತಿರುವಂತೆಯೇ ಭಾರತೀಯ ನೌಕಾಪಡೆ ಕಟ್ಟೆಚ್ಚರವಹಿಸಿದ್ದು, ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದೆ.
ಅತಿ ಹೆಚ್ಚು ಪ್ರಭಾವಕ್ಕೆ ಒಳಗಾಗುವ ಪ್ರದೇಶಕ್ಕೆ ತೆರಳಲು ನೌಕಾಪಡೆಯ ಹಡಗುಗಳನ್ನು ವಿಶಾಖಪಟ್ಟಣ ಮತ್ತು ಚೆನ್ನೈನಲ್ಲಿ ನಿಯೋಜಿಸಲಾಗಿದೆ. ಈ ಹಡಗುಗಳಲ್ಲಿ ರಬ್ಬರ್ ಬೋಟಗಳು, ಪರಿಹಾರದ ವಸ್ತುಗಳು, ಹಾರ, ಬಟ್ಟೆಗಳು, ಔಷಧಿ, ಹೊದಿಕೆಗಳಿವೆ.