ಬೆಂಗಳೂರು: ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ವತಿಯಿಂದ ವೈದ್ಯ ವೆಂಕಟೇಶ್ ಶರ್ಮ ಹಾಗೂ ನಿವೃತ್ತ ಶಿಕ್ಷಕ ಗಿರಿಯಪ್ಪ ಅವರಿಗೆ ಎಸ್.ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮಾರಕ ಪ್ರಶಸ್ತಿಯನ್ನು ನಗರದಲ್ಲಿ ಭಾನುವಾರ ಪ್ರದಾನ ಮಾಡಲಾಯಿತು.
ಪ್ರಶಸ್ತಿಯು ತಲಾ ₹12,000 ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಮಹಾಲಕ್ಷ್ಮಮ್ಮ ಅವರ ಸೊಸೆ ಚಂದ್ರಮ್ಮ ಅವರನ್ನು ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷೆ ಗೌರಿ ನಾಗರಾಜ್, ‘ಅಮ್ಮ (ಮಹಾಲಕ್ಷ್ಮಮ್ಮ) ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದವರು. ಅವರ ಸ್ಮರಣಾರ್ಥವಾಗಿ, ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿರುವವರನ್ನು ಗುರುತಿಸಿ ಗೌರವಿಸುತ್ತಿದ್ದೇವೆ. ಪ್ರತಿ ವರ್ಷವೂ ಈ ಕಾರ್ಯವನ್ನು ಪ್ರಶಸ್ತಿ ಕೊಡಲಾಗುತ್ತದೆ’ ಎಂದರು.
ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ, ‘ಸಂಗೀತ ಸೇವೆಯೇ ಜನಾರ್ಧನ ಸೇವೆ. ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಿದವರನ್ನು ಗುರುತಿಸುವ ಈ ಕಾರ್ಯವೂ ನಿಜಕ್ಕೂ ಶ್ಲಾಘನೀಯ’ ಎಂದು ಹೇಳಿದರು.
ಮಹಾಲಕ್ಷ್ಮಮ್ಮ ಅವರ ಸಾಹಿತ್ಯ ಪರಿಕಲ್ಪನೆಯ ‘ಬೆಳಗೆರೆ ರಂಗನಾಥ ಸ್ವಾಮಿ ಪಾರಿವಾಟ ನೃತ್ಯ’ ರೂಪಕವನ್ನು ಪ್ರದರ್ಶಿಸಲಾಯಿತು.