ನವದೆಹಲಿ: ಉತ್ತರ ಪ್ರದೇಶದ ನಿವೃತ್ತ ಐಎಎಸ್ ಅಧಿಕಾರಿ ನೇತರಾಂ ಮತ್ತು ಅವರ ಆಪ್ತರಿಗೆ ಸೇರಿದ್ದ ₹225 ಕೋಟಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ (ಐಟಿ) ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ತೆರಿಗೆ ವಂಚನೆ ಆರೋಪದಡಿ ಐಟಿ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ದೆಹಲಿ, ಮುಂಬೈ, ನೋಯ್ಡಾ ಮತ್ತು ಕೋಲ್ಕತ್ತದಲ್ಲಿನ 20 ಸ್ಥಿರಾಸ್ತಿಗಳ ದಾಖಲೆ ಹಾಗೂ ಅಧಿಕಾರಿಯ ಲಖನೌ ನಿವಾಸದಲ್ಲಿ ಇದ್ದ ಒಂದು ಮರ್ಸಿಡಿಸ್, ಎರಡು ಟೊಯೊಟಾ ಫಾರ್ಚೂನರ್ ಕಾರುಗಳನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಅಧಿಕಾರಿ ಮತ್ತು ಆಪ್ತರು ಕೋಲ್ಕತ್ತದ ಕಂಪನಿಗಳಿಗೆ ₹98.82 ಕೋಟಿ ವಂಚಿಸಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.
₹2.03 ಕೋಟಿ ನಗದು, ₹17.79 ಲಕ್ಷ ಮೌಲ್ಯದ ಆಭರಣವನ್ನು ದಾಳಿಯ ವೇಳೆ ವಶಕ್ಕೆ ಪಡೆಯಲಾಗಿದೆ. ₹50 ಲಕ್ಷ ಮೌಲ್ಯದ ಮಾಂಟ್ಬ್ಲಾಂಕ್ ಪೆನ್ಗಳೂ ಪತ್ತೆಯಾಗಿವೆ. ಬೇನಾಮಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮುಖ್ಯಮಂತ್ರಿಯಾಗಿದ್ದ ವೇಳೆ ನೇತರಾಂ ಅವರು ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು.