ಕಾರವಾರ: ವಿಧಾನಸಭಾ ಚುನಾವಣೆಯ ಕರ್ತವ್ಯದಲ್ಲಿರುವ ಸಿಬ್ಬಂದಿಯ ಪ್ರಯಾಣಕ್ಕೆ ಬಸ್ಗಳನ್ನು ನಿಯೋಜಿಸಿದ ಕಾರಣ ವಿವಿಧೆಡೆ ತೆರಳಬೇಕಾಗಿದ್ದ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಇಲ್ಲಿನ ನಿಲ್ದಾಣಗಳಲ್ಲಿ ಬಸ್ಗಳಿಲ್ಲದೆ ಪ್ರಯಾಣಿಕರು ಕಾದು ಸುಸ್ತಾದ ದೃಶ್ಯ ಶುಕ್ರವಾರ ಕಂಡು ಬಂತು.
ನಗರದಲ್ಲಿ ವಾಸವಿರುವ ಹೊರ ಜಿಲ್ಲೆಗಳ ಜನರೂ ಮತದಾನ ಮಾಡಲು ತಮ್ಮ ಊರಿಗೆ ತೆರಳಲು ಸಹ ಪರದಾಡುವಂತಾಯಿತು. ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲೆಯ 175 ಸಾರಿಗೆ ಬಸ್ಗಳನ್ನು ಹಾಗೂ 132 ಮ್ಯಾಕ್ಸಿ ಕ್ಯಾಬ್ಗಳನ್ನು ಬಳಸಿಕೊಂಡಿರುವುದರಿಂದ ಬಸ್ಗಳ ಕೊರತೆ ಉಂಟಾಗಿದೆ. ಇರುವ ಬಸ್ಗಳನ್ನೆ ಬಳಸಿಕೊಂಡು ಊರಿಗೆ ತಲುಪಬೇಕಾದ ಪರಿಸ್ಥಿತಿ ಪ್ರಯಾಣಿಕರಿಗೆ ಬಂದೊದಗಿದೆ.
ಇದರಿಂದಾಗಿ ಸಿಕ್ಕ ಸಿಕ್ಕ ಬಸ್ಗಳಲ್ಲಿ ಪ್ರಯಾಣಿಕರು ಹತ್ತಿಕೊಳ್ಳುತ್ತಿರುವುದರಿಂದ ನಿಲ್ದಾಣ ಗಳಲ್ಲೇ ನೂಕುನುಗ್ಗಲು ಉಂಟಾಗಿದೆ.
ಸೀಟುಗಳು ಭರ್ತಿ: ಹುಬ್ಬಳ್ಳಿ, ಧಾರವಾಡ, ಮಂಗಳೂರು, ಬೆಳಗಾವಿ, ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ಹೊರಡುವ ಖಾಸಗಿ ಬಸ್ಗಳ ಬಹುತೇಕ ಸೀಟುಗಳು ಭರ್ತಿಯಾಗಿದ್ದವು.
‘ಚುನಾವಣಾ ಕರ್ತವ್ಯಕ್ಕೆ ಸಾರಿಗೆ ಬಸ್ಗಳನ್ನು ಬಳಕೆ ಮಾಡಿ ಕೊಂಡಿರುವುದರಿಂದ ಪ್ರಯಾಣಕ್ಕೆ ಕೊರತೆ ಉಂಟಾಗುತ್ತಿತ್ತು. ಹೆಚ್ಚುವರಿ ಬಸ್ಗಳನ್ನು ಪೂರೈಸಿಕೊಳ್ಳಲಾಗಿದೆ. ಜತೆಗೆ, ಬಸ್ಗಳ ನಡುವೆ ಸಮಯದ ಅಂತರಗಳನ್ನು ಕಾಯ್ದುಕೊಳ್ಳಲಾಗಿದೆ’ ಎಂದು ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.