ನೈಸ್ ಅಕ್ರಮದ ಆರೋಪ ಪಿಐಎಲ್ ವಜಾ

ನವದೆಹಲಿ: ಬೆಂಗಳೂರು– ಮೈಸೂರು ನಗರಗಳಿಗೆ ಸಂಪರ್ಕ ಕಲ್ಪಿಸುವ ನೈಸ್ ರಸ್ತೆ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ದೂರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿತು.
‘ನೈಸ್’ ಯೋಜನೆ ಹೆಸರಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಾಕಷ್ಟು ಹಣವನ್ನು ಲೂಟಿ ಹೊಡೆದಿದ್ದಾರೆ’ ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠ, ಈ ಕುರಿತು ವಾದ ಮಂಡಿಸಲು 3 ನಿಮಿಷಗಳ ಕಾಲಾವಕಾಶ ನೀಡಿತು.
ಆದರೆ, 10 ನಿಮಿಷ ಕಳೆದರೂ ಅಬ್ರಹಾಂ ಅವರ ವಾದ ಮಂಡನೆ ಪೂರ್ಣಗೊಳ್ಳದ್ದರಿಂದ ನ್ಯಾಯಪೀಠ ತೀವ್ರ ಅಸಮಾಧಾನ ಹೊರಹಾಕಿತು.
‘ನೀವು ಮಂಡಿಸುತ್ತಿರುವ ವಾದದಲ್ಲಿ ಹುರುಳಿದೆ ಎಂದು ಅನ್ನಿಸುತ್ತಿಲ್ಲ. ಈ ಕುರಿತು ಈ ಹಿಂದೆಯೂ ಅನೇಕ ಬಾರಿ ಚರ್ಚಿಸಲಾಗಿದ್ದರೂ, ವಿನಾ ಕಾರಣ ಪಿಐಎಲ್ ಸಲ್ಲಿಸಿರುವುದಕ್ಕೆ ನಿಮಗೆ ದಂಡ ಹಾಕಬಹುದಲ್ಲವೇ, ಈ ರೀತಿಯ ಅರ್ಜಿ ಸಲ್ಲಿಸುವುದರಿಂದ ನಿಮಗೇನು ಲಾಭ’ ಎಂದು ಪೀಠ ಪ್ರಶ್ನಿಸಿತು.
ಈ ಸಂದರ್ಭ ಅಬ್ರಹಾಂ ನೀಡಿದ ಸ್ಪಷ್ಟನೆಗೆ ಒಪ್ಪದ ನ್ಯಾಯಮೂರ್ತಿಗಳು, ‘ಅನೇಕ ಪ್ರಕರಣಗಳ ವಿಚಾರಣೆ ಬಾಕಿ ಇರುವುದರಿಂದ ಅನಗತ್ಯವಾಗಿ ನ್ಯಾಯಾಲಯದ ಸಮಯವನ್ನು ಹಾಳು ಮಾಡಬೇಡಿ’ ಎಂದು ತಿಳಿಸಿದರಲ್ಲದೆ, ಅಬ್ರಹಾಂ ಅವರನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದುಕೊಂಡು ಹೋಗುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ನ್ಯಾಯಮೂರ್ತಿಗಳ ಮಾತಿನಿಂದ ವಿಚಲಿತರಾದ ಅಬ್ರಹಾಂ, ಅಲ್ಲಿಂದ ಹೊರ ನಡೆದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.