ನವದೆಹಲಿ:ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳು ಕೊನೇಗಳಿಗೆಯಲ್ಲಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರತಿರಸ್ಕರಿಸಿದೆ. ಈ ಮೂಲಕ ನಿರ್ಭಯ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂ ಆದಂತೆ ಆಗಿದೆ.
ನಿರ್ಭಯಾ ಪ್ರಕರಣದ ಆರೋಪಿಗಳು ಸಲ್ಲಿಸಿರುವ ತುರ್ತು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡದೆಹಲಿ ಹೈಕೋರ್ಟ್, 'ನಿಮ್ಮ ವಾದದಲ್ಲಿ ಹೆಚ್ಚು ಹುರುಳಿಲ್ಲ. ನಮ್ಮ ಬಳಿ ಸಮಯವೂ ಇಲ್ಲ. ವಾದವನ್ನು ಬೇಗ ಮುಗಿಸಿ' ಎಂದು ಅತ್ಯಾಚಾರಿಗಳ ಪರ ವಕೀಲರಿಗೆ ಸೂಚಿಸಿತ್ತು.
'ನಿಮ್ಮ ವಾದದಲ್ಲಿ ಯಾವುದೇ ಹುರುಳಿಲ್ಲ, ಸಂಬಂಧಿಸಿದವರಿಗೆ ಜ್ಞಾಪನಾಪತ್ರ ನೀಡಿಲ್ಲ, ಅಫಿಡವಿಟ್ ಇಲ್ಲ, ಏನೇನೂ ಇಲ್ಲ. ಅದ್ಹೇಗೆ ನೀವು ಅರ್ಜಿ ಸಲ್ಲಿಸಿದಿರಿ' ಎಂದು ನ್ಯಾಯಮೂರ್ತಿ ಮನಮೋಹನ್ ಪ್ರಶ್ನಿಸಿದರು.
'ಕೊರೊನಾವೈರಸ್ ಭೀತಿಯಿಂದಾಗಿ ದಾಖಲೆಗಳ ಜೆರಾಕ್ಸ್ ಪ್ರತಿ ಪಡೆಯಲು ಸಾಧ್ಯವಾಗಲಿಲ್ಲ' ಎಂದುಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಹೇಳಿದರು.
'ಇಂದು ಮೂರು ಬಾರಿ ನೀವು ವಿಚಾರಣೆಗಳಿಗೆ ಬಂದಿದ್ದಿರಿ. ಈಗ ದಾಖಲೆ ಒದಗಿಸಲು ಸಾಧ್ಯವಾಗಲಿಲ್ಲ ಎನ್ನುತ್ತಿದ್ದೀರಿ. ನಾವಿಲ್ಲಿ 10 ಗಂಟೆಯಲ್ಲಿ ನಿಮ್ಮ ವಾದ ಆಲಿಸುತ್ತಿದ್ದೇವೆ. ನ್ಯಾಯಾಲಯಗಳು ಮುಕ್ತವಾಗಿವೆ' ಎಂದು ವಕೀಲರ ವಾದವನ್ನು ನ್ಯಾಯಾಧೀಶರು ತಳ್ಳಿ ಹಾಕಿದರು.
ಶುಕ್ರವಾರ (ಮಾರ್ಚ್ 20) ಬೆಳಿಗ್ಗೆ 5.30ಕ್ಕೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ನ್ಯಾಯಾಲಯ ಆದೇಶಿಸಿತ್ತು. ಈ ಆದೇಶದ ಮರುಪರಿಶೀಲನೆಗೆ ವಿನಂತಿಸಿ ಆರೋಪಿಗಳ ಪರ ವಕೀಲರು ಕೊನೆಗಳಿಗೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಮನವಿಯನ್ನು ನ್ಯಾಯಾಲಯ ತಳ್ಳಿಹಾಕುವ ಮೂಲಕ ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಶುಕ್ರವಾರ ಮುಂಜಾನೆ ಗಲ್ಲು ಶಿಕ್ಷೆ ಕಾಯಂ ಆದಂತೆ ಆಗಿದೆ.