ನವದೆಹಲಿ: ನಿರ್ಭಯಾ ನಿಧಿಯ ಹಣವನ್ನು ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಬಳಸಿರುವುದಕ್ಕೆ ಸಂಸದೀಯ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮಹಿಳೆಯರ ರಕ್ಷಣೆಗಾಗಿ ಹಂಚಿಕೆ ಮಾಡಿರುವ ಹಣವನ್ನು ಹೀಗೆ ಅನ್ಯ ಉದ್ದೇಶಗಳಿಗೆ ಬಳಸಿದರೆ ಮೂಲ ಆಶಯಕ್ಕೇ ಧಕ್ಕೆ ಉಂಟಾಗುವುದು ಎಂದು ಕಾಂಗ್ರೆಸ್ನ ಸಂಸದ ಪಿ.ಚಿದಂಬರಂ ನೇತೃತ್ವದ ಗೃಹ ಖಾತೆ ವ್ಯವಹಾರಗಳ ಮೇಲಿನ ಸಂಸದೀಯ ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ.
‘ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬೇರೆಯೇ ಮೂಲಗಳಿಂದ ಹಣಕಾಸು ಒದಗಿಸಬೇಕು. ಅಲ್ಲದೇ, ನಿರ್ಭಯಾ ನಿಧಿಯ ಹಣವನ್ನು ಈ ರೀತಿ ಬೇರೆ ಉದ್ದೇಶಗಳಿಗಾಗಿ ಬಳಸುವುದನ್ನು ತಡೆಯಲು ಗೃಹ ಸಚಿವಾಲಯ ಕ್ರಮ ಕೈಗೊಳ್ಳುವಂತೆ’ ಸಮಿತಿ ಶಿಫಾರಸು ಮಾಡಿದೆ.
ಮಹಿಳೆಯರ ರಕ್ಷಣೆಗೆ ಕ್ರಮ ಕೈಗೊಳ್ಳುವ ಸಲುವಾಗಿ ಯುಪಿಎ ನೇತೃತ್ವದ ಸರ್ಕಾರದ ಅವಧಿಯಲ್ಲಿ 2013ರಲ್ಲಿ ನಿರ್ಭಯಾ ನಿಧಿಯನ್ನು ಸ್ಥಾಪಿಸಲಾಗಿತ್ತು.