ನವದೆಹಲಿ: ‘ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಲಖನೌಗೆ ಭೇಟಿ ನೀಡಿದ್ದ ವೇಳೆ, ಅವರಿಗೆ ಭದ್ರತೆ ಒದಗಿಸುವಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ’ ಎಂದು ಸಿಆರ್ಪಿಎಫ್ ಸೋಮವಾರ ಹೇಳಿದೆ.
ಇದೇ 28ರಂದು ಲಖನೌಗೆ ಭೇಟಿ ನೀಡಿದ್ದ ಪ್ರಿಯಾಂಕಾ, ‘ಸ್ಥಳೀಯ ಪೊಲೀಸರು ನನ್ನ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ನಾನು ಹೆಚ್ಚು ಸ್ಥಳಗಳಿಗೆ ಸಂಚರಿಸಬಾರದು ಎಂದು ನಿರ್ಬಂಧ ಹಾಕಲಾಯಿತು’ ಎಂದು ಆರೋಪಿಸಿದ್ದರು.
‘ಪ್ರಿಯಾಂಕಾ ಅವರು ಹೆಲ್ಮೆಟ್ ಇಲ್ಲದೆ ದ್ವಿಚಕ್ರವಾಹನದ ಹಿಂಬದಿ ಸವಾರರಾಗಿ ಪ್ರಯಾಣಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಮುನ್ಸೂಚನೆ ನೀಡದೆ, ನಿಗದಿಪಡಿಸದ ಮಾರ್ಗಗಳಲ್ಲಿ ಸಂಚರಿಸಿದ್ದರಿಂದ, ಮುಂಚಿತವಾಗಿ ಭದ್ರತೆ ಒದಗಿಸಲು ಸಾಧ್ಯವಾಗಿಲ್ಲ’ ಎಂದು ಸಿಆರ್ಪಿಎಫ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಸಂಚಾರದ ವೇಳೆ ಪ್ರಿಯಾಂಕಾ ಅವರು ವೈಯಕ್ತಿಕ ಭದ್ರತಾ ಸಿಬ್ಬಂದಿ ಹೊರತಾಗಿ ಗುಂಡುನಿರೋಧಕ ರಕ್ಷಣೆ ಇಲ್ಲದ ಸಾರ್ವಜನಿಕ ವಾಹನವನ್ನು ಸಂಚಾರಕ್ಕೆ ಬಳಸಿಕೊಂಡಿದ್ದಾರೆ. ಸಾಕಷ್ಟು ಅಡೆತಡೆಗಳ ನಡುವೆಯೂ ನಾವು ಸೂಕ್ತ ಭದ್ರತೆ ಒದಗಿಸಿದ್ದೇವೆ’ ಎಂದು ಸಂಸ್ಥೆ ಹೇಳಿದೆ.