ನವದೆಹಲಿ: ಮಧ್ಯ ಪ್ರದೇಶ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಇಂದು ರಾತ್ರಿ ಅಧಿಕೃತ ಉತ್ತರ ದೊರೆಯಲಿದೆ. ಕಮಲನಾಥ್ ಸಿಎಂ ಆಗಲಿದ್ದಾರೆ ಎಂಬ ಸುದ್ದಿ ಈಗಾಗಲೇ ಹರಡಿರುವ ಬೆನ್ನಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ, ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿರುವ ಕಮಲನಾಥ್ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧಿಯಾ ಗುರುವಾರ ಸಂಜೆ ರಾಹುಲ್ ಗಾಂಧಿ ಅವರನ್ನು ನವದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದು, ಉಭಯ ನಾಯಕರು ಈಗಾಗಲೇ ಭೋಪಾಲ್ನತ್ತ ಹೊರಟ್ಟಿದ್ದಾರೆ.
ಮಾತುಕತೆಯ ಬಳಿಕ ರಾಹುಲ್ಸಾಹಿತಿ ಲಿಯೊ ಟಾಲ್ಸ್ಟಾಯ್ನ ಸಾಲುಗಳನ್ನು ಒಳಗೊಂಡ ಟ್ವೀಟ್ ಮಾಡಿದ್ದು, ಅಕ್ಕಪಕ್ಕದಲ್ಲಿ ಕಮಲನಾಥ್ ಮತ್ತು ಸಿಂಧಿಯಾ ಇರುವ ಫೋಟೊ ಪ್ರಕಟಿಸಿ ‘ಸಂಯಮ ಮತ್ತು ಸಮಯ ಅತ್ಯಂತ ಬಲಿಷ್ಠ ಯೋಧರು’ ಎಂದು ಬರೆದುಕೊಂಡಿದ್ದಾರೆ. ಈ ಸಾಲಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿ ವಿಶ್ಲೇಷಿಸಲಾಗುತ್ತಿದೆ.
ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಜ್ಯೋತಿರಾದಿತ್ಯ ಸಿಂಧಿಯಾ, ‘ಇದು ಸ್ಪರ್ಧೆಯಲ್ಲ. ಇದು ಕುರ್ಚಿಗೆ ಸಂಬಂಧಿಸಿದಲ್ಲ, ಮಧ್ಯ ಪ್ರದೇಶದ ಜನರ ಸೇವೆಗಾಗಿ ನಾವು ಇಲ್ಲಿದ್ದೇವೆ. ಸದ್ಯ ಭೋಪಾಲ್ನತ್ತ ಮರಳುತ್ತಿದ್ದು, ನಿರ್ಧಾರದ ಬಗ್ಗೆ ಇಂದು ನಿಮಗೆ ತಿಳಿಯಲಿದೆ’ ಎಂದಿದ್ದಾರೆ.
230 ಸದಸ್ಯ ಬಲದ ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಬಹುಮತಕ್ಕೆ 116 ಸ್ಥಾನಗಳು ಅಗತ್ಯ. ಕಾಂಗ್ರೆಸ್ 114 ಸ್ಥಾನ ಹೊಂದಿದ್ದು, ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ಬಿಎಸ್ಪಿ ಈಗಾಗಲೇ ಘೋಷಿಸಿದೆ.
ಇವನ್ನೂಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.