ನವದೆಹಲಿ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ರನ್ನಾಗಿ ಮಾಜಿ ಅಧಿಕಾರಿ ನೃಪೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಲಾಗಿದೆ. ಇವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಿದ್ದರು.
ಬುಧವಾರ ನಡೆದ ರಾಮಮಂದಿರ ಟ್ರಸ್ಟ್ನ ಪ್ರಥಮ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಳಿದಂತೆ, ಟ್ರಸ್ಟ್ನ ಅಧ್ಯಕ್ಷರಾಗಿ ಮಹಂತ ನೃತ್ಯ ಗೋಪಾಲದಾಸ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಚಂಪತ್ ರಾಯ್ ಅವರು ಆಯ್ಕೆಯಾದರು.
ಹಿರಿಯ ವಕೀಲ ಕೆ.ಪರಾಶರನ್ ಅವರ ನಿವಾಸದಲ್ಲಿ ಸಭೆ ನಡೆಯಿತು. ಟ್ರಸ್ಟ್ನ ಖಜಾಂಚಿಯಾಗಿ ಸ್ವಾಮಿ ಗೋವಿಂದ್ ದೇವ್ ಗಿರಿ ಅವರನ್ನು ಆಯ್ಕೆಮಾಡಲಾಯಿತು. ಅಲ್ಲದೆ, ಮಂದಿರದ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕುರಿತು ಸಭೆ ಚರ್ಚಿಸಿತು.
ಮಂದಿರ ನಿರ್ಮಾಣ ಕಾರ್ಯಕ್ಕಾಗಿ ದೇಣಿಗೆಯನ್ನು ಸಂಗ್ರಹಿಸಲು ಅನುವಾಗುವಂತೆ ಎಸ್ಬಿಐನ ಅಯೋಧ್ಯೆಯ ಶಾಖೆಯಲ್ಲಿ ಖಾತೆ ತೆರೆಯಲು ನಿರ್ಧರಿಸಲಾಯಿತು ಎಂದು ಸಭೆಯ ನಂತರ ಚಂಪತ್ ರಾಯ್ ಸುದ್ದಿಗಾರರಿಗೆ ತಿಳಿಸಿದರು. ಟ್ರಸ್ಟ್ ಸ್ಥಾಪಿಸುವ ನಿರ್ಧಾರವನ್ನು ಪ್ರಧಾನಿ ಮೋದಿ ಫೆ.5ರಂದು ಸಂಸತ್ತಿನಲ್ಲಿ ಪ್ರಕಟಿಸಿದ್ದರು.