ನವದೆಹಲಿ: ತಿಹಾರ್ ಜೈಲಿನಲ್ಲಿ ಶುಕ್ರವಾರ ವಿಚಿತ್ರ ಘಟನೆಯೊಂದು ನಡೆದಿದೆ.ತನ್ನ ಬೆನ್ನಿನ ಮೇಲೆ ಬಲವಂತವಾಗಿ 'ಓಂ' ಎಂಬ ಗುರುತಿನ ಹಚ್ಚೆ ಹಾಕಿದ್ದಾರೆ ಎಂದು ವ್ಯಕ್ತಿಯೊಬ್ಬ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾನೆ.
ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಗೆ ಈ ಅನುಭವವಾಗಿದೆ. ನಬ್ಬೀರ್ ಎಂಬ ವ್ಯಕ್ತಿಯೇ ದೂರು ಸಲ್ಲಿಸಿದವ. ನಬ್ಬೀರ್ನ ನ್ಯಾಯಾಂಗ ಬಂಧನದ ಅವಧಿ ಶುಕ್ರವಾರ ಪೂರ್ಣಗೊಂಡಿತ್ತು. ಈ ಕಾರಣದಿಂದ ಆತನನ್ನು ಆ ವ್ಯಾಪ್ತಿಯ ಕರಕರ್ದೂಮ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರ ಎದುರು ಬೆನ್ನು ಪ್ರದರ್ಶಿಸಿದಾಗಲೇ ಘಟನೆ ಬೆಳಕಿಗೆ ಬಂದಿದೆ.
ತಾನು ನ್ಯಾಯಾಂಗ ಬಂಧನಕ್ಕೆ ಒಳಪಟ್ಟು ತಿಹಾರ್ ಜೈಲಿಗೆ ಹೋದಾಗ ಜೈಲಿನ ಸಿಬ್ಬಂದಿ ನನ್ನ ಬೆನ್ನಹಿಂದೆ ಬಲವಂತವಾಗಿ ಈ ಹಚ್ಚೆ ಹಾಕಿದ್ದಾರೆ ಎಂದು ತಾನು ಧರಿಸಿದ್ದ ಷರ್ಟ್ ಅನ್ನು ತೆಗೆದು ಮ್ಯಾಜಿಸ್ಟ್ರೇಟ್ ರಿಚಾ ಪರಾಶರ್ ಅವರ ಮುಂದೆ ತೋರಿಸಿದ್ದಾನೆ. ಅಲ್ಲದೆ, ಜೈಲಿನ ಅಧಿಕಾರಿಗಳು ನನ್ನ ಬೆನ್ನಿನ ಮೇಲೆ ಕಾದ ಕಬ್ಬಿಣದ ಸಲಕರಣೆಯಿಂದ ಈ ಹಚ್ಚೆ ಹಾಕಿದ್ದಾರೆ ಎಂದು ದೂರು ನೀಡಿದ.
ಈ ವಿಷಯ ತಿಳಿಯುತ್ತಿದ್ದಂತೆ ಆಶ್ಚರ್ಯಗೊಂಡ ನ್ಯಾಯಾಧೀಶರು, ತಿಹಾರ್ ಜೈಲಿನ ಅಧಿಕಾರಿಗಳು 24 ಗಂಟೆಯೊಳಗೆ ಈ ಘಟನೆ ಕುರಿತು ಸವಿವರವಾದ ವರದಿ ಸಲ್ಲಿಸಬೇಕು ಎಂದು ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದ್ದಾರೆ.
ಆರೋಪಿ ಮಾಡಿರುವ ಆಪಾದನೆ ತುಂಬಾ ಗಂಭೀರ ಸ್ವರೂಪದ್ದಾಗಿದ್ದು, ಕೂಡಲೆ ಗಮನಕೊಡಬೇಕಾದ ಅಂಶವಿದು, ಅಲ್ಲದೆ, ಆರೋಪಿ ನಬ್ಬೀರ್ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತಕ್ಷಣ ಚಿಕಿತ್ಸೆ ಕೊಡಿಸಬೇಕು. ಈ ಕೂಡಲೆ ಕಾರಾಗೃಹ ವಿಭಾಗದ ಡಿಜಿಪಿ ಅವರಿಗೆ ನೋಟೀಸ್ ಜಾರಿಗೊಳಿಸುವಂತೆ ನ್ಯಾಯಾಧೀಶರು ಆದೇಶಿಸಿದರು.
ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಬೇಕು. ಈತನ ಜೊತೆ ಇದ್ದ ಇತರೆ ಆರೋಪಿಗಳು, ಖೈದಿಗಳ ಹೇಳಿಕೆಗಳನ್ನೂ ಪಡೆದುಕೊಳ್ಳಬೇಕು. ಇದರೊಂದಿಗೆ ತಿಹಾರ್ ಜೈಲಿನಲ್ಲಿ ಇನ್ನು ಮುಂದೆ ಯಾವುದೇ ಆರೋಪಿಗಳಿಗೆಈ ರೀತಿಯಾಗದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನವದೆಹಲಿಯ ಸೀಲಾಂಪುರಿ ಪ್ರದೇಶದ ವಾಸಿಯಾದ ನಬ್ಬೀರ್ನನ್ನು ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಆರೋಪದಲ್ಲಿ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಶುಕ್ರವಾರದವರೆಗೆ ನ್ಯಾಯಾಂಗವಶಕ್ಕೆ ನೀಡಿತ್ತು. ನಂತರ ಆತನನ್ನು ತಿಹಾರ್ ಜೈಲಿನ ಹೈ ರಿಸ್ಕ್ ವಾರ್ಡ್ ನಂ.4 ಎಂಬಲ್ಲಿ ಇರಿಸಲಾಗಿತ್ತು. ಇಲ್ಲಿ ಹೆಚ್ಚಿನ ಭದ್ರತೆ ಇರುತ್ತಾದರೂ ಈ ಘಟನೆ ನಡೆದಿರುವುದು ಆಶ್ಚರ್ಯಕರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಧೀಶರ ಮುಂದೆ ಜೈಲಿನ ಅಧೀಕ್ಷಕ ರಾಜೇಶ್ ಚೌಹಾನ್ ನನಗೆ ಬಲವಂತವಾಗಿ ಈ ರೀತಿ ಮಾಡಿದ್ದಾರೆ ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ. ಕಾರಾಗೃಹದ ಡಿಐಜಿ ಈ ಪ್ರಕರಣದ ತನಿಖೆ ನಡೆಸುತ್ತಾರೆ. ಮತ್ತೊಬ್ಬನನ್ನು ಬೇರೊಂದು ಜೈಲಿನಲ್ಲಿ ಇಡಲಾಗಿದೆ. ಈ ಕುರಿತು ಅತಿಶೀಘ್ರವೇ ನ್ಯಾಯಾಲಯಕ್ಕೆವರದಿ ಸಲ್ಲಿಸಲಾಗುವುದು ಎಂದು ಕಾರಾಗೃಹ ವಿಭಾಗದ ಡಿಜಿಪಿ ಸುದ್ದಿಸಂಸ್ಥೆಗೆತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.