ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಘೋಷಣೆಗೆ ಮುನ್ನವೇ ಬಂಡಾಯದ ಬಾವುಟ

Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುನ್ನವೇ ರಾಜಧಾನಿಯಲ್ಲಿ ಬಂಡಾಯದ ಕಾವು ಹೆಚ್ಚುತ್ತಿದೆ.

ಟಿಕೆಟ್‌ ಕೈತಪ್ಪುವ ಸುಳಿವು ಸಿಗುತ್ತಿದ್ದಂತೆಯೇ ಕೆಲವು ನಾಯಕರು ಬೆಂಬಲಿಗರೊಂದಿಗೆ ಬೇರೆ ಪಕ್ಷಗಳಿಗೆ ವಲಸೆ ಹೋಗುವುದಕ್ಕೆ ಸಿದ್ಧತೆಯನ್ನೂ ನಡೆಸಿದ್ದಾರೆ.

ಪದ್ಮನಾಭನಗರದಲ್ಲಿ ವಿರೋಧ: ಈ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಅಶೋಕ ವಿರುದ್ಧ ಸೋತಿದ್ದ ಕಾಂಗ್ರೆಸ್‌ನ ಎಲ್‌.ಎಸ್‌.ಚೇತನ್‌ ಗೌಡ ಅವರ ತಂದೆ ಶಿವರಾಮಗೌಡ ಈಗ ಜೆಡಿಎಸ್‌ ಸೇರಿದ್ದಾರೆ. ಚೇತನ್‌ ಇನ್ನೂ ಕಾಂಗ್ರೆಸ್‌ನಲ್ಲಿದ್ದಾರೆ. ಈ ಬಾರಿ ಅವರೂ ಟಿಕೆಟ್‌ ಆಕಾಂಕ್ಷಿ. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಗುರಪ್ಪ ನಾಯ್ಡು ಇನ್ನೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಕ್ಷೇತ್ರ ಮರು ವಿಂಗಡಣೆಗೂ ಮುನ್ನ ಇದ್ದ ಉತ್ತರ ಹಳ್ಳಿ ಕ್ಷೇತ್ರ ಸೇರಿ ಸತತ ಐದು ಬಾರಿ ಗೆದ್ದಿರುವ ಕಮಲ ಪಾಳಯದ ಮುಖಂಡ ಆರ್‌.ಅಶೋಕ ವಿರುದ್ಧ, ಅವರ ಪಕ್ಷದ ರಾಜಕೀಯ ಪಟ್ಟುಗಳನ್ನು ಚೆನ್ನಾಗಿ ಬಲ್ಲ ಡಿ.ವೆಂಕಟೇಶಮೂರ್ತಿ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಕಾಂಗ್ರೆಸ್‌ ಪಾಳಯದಲ್ಲಿ ಚಿಂತನೆ ನಡೆದಿತ್ತು. ಈಗ ಮಾಜಿ ಶಾಸಕ ಎಂ. ‌ಶ್ರೀನಿವಾಸ ಹೆಸರು ಮುನ್ನೆಲೆಗೆ ಬಂದಿದೆ. ಇದರಿಂದ ಗುರಪ್ಪ ನಾಯ್ಡು ಬೆಂಬಲಿಗರು ಕೆರಳಿದ್ದಾರೆ.

ಸಿ.ವಿ.ರಾಮನ್‌ನಗರ ಸಂಘರ್ಷ: ಸಿ.ವಿ.ರಾಮನ್‌ನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ‍ಪಿ.ರಮೇಶ್‌ ಅವರು ಜೆಡಿಎಸ್‌ ಸೇರಿದ್ದಾರೆ. ಜನವರಿ 21ರಂದು ಕ್ಷೇತ್ರದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನೀವು ಯಾರ ಹೆಸರು ಹೇಳುತ್ತೀರೋ ಅವರಿಗೆ ಟಿಕೆಟ್‌ ನೀಡುತ್ತೇವೆ’ ಎಂದಿದ್ದರು. ಅದಕ್ಕೆ ಸ್ಥಳೀಯ ಕಾರ್ಯಕರ್ತರು, ‘ನಾವು ಲೋಕೋ‍ಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ಆರ್ಶೀವಾದ ಮಾಡುತ್ತೇವೆ’ ಎಂದು ಘೋಷಣೆ ಕೂಗಿ, ಜೈಕಾರ ಹಾಕಿದ್ದರು.

ಈ ಕ್ಷೇತ್ರದಿಂದ ಕಣಕ್ಕಿಳಿಯಲು ಮಹದೇವಪ್ಪ ಸಿದ್ಧತೆ ನಡೆಸಿದ್ದರು. ಅವರಿಗೆ ಶುಭಾಶಯ ಹಾರೈಸಿ ಕ್ಷೇತ್ರದ ಹಲವೆಡೆ ಸ್ಥಳೀಯ ಕೆಲವರು ಬ್ಯಾನರ್‌ ಹಾಕಿದ್ದರು.  ಇದಕ್ಕೆ ಪ್ರತಿಯಾಗಿ ‘ರಮೇಶ್‌ ಅವರೇ  ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ’ ಎಂದು ಅವರ ಬೆಂಬಲಿಗರು ಬ್ಯಾನರ್‌ ಅಳವಡಿಸಿದ್ದರು. ಈ ಕಾರಣಕ್ಕೆ ಎರಡೂ ಬಣಗಳ ಮಧ್ಯೆ ಸಂಘರ್ಷ ಏರ್ಪಟ್ಟಿತ್ತು. ಬಳಿಕ ಇಲ್ಲಿಂದ ಕಣಕ್ಕೆ ಇಳಿಯಲು ಮಹದೇವಪ್ಪ ಹಿಂಜರಿದಿದ್ದರು. ಈ ವಿವಾದದ ಬಳಿಕ ಮುಖ್ಯಮಂತ್ರಿ ಹಾಗೂ ಪಿ.ರಮೇಶ್‌ ನಡುವಿನ ‘ಅಂತರ’ ಹೆಚ್ಚಾಗಿತ್ತು.

ಜೆಡಿಎಸ್‌ನತ್ತ ಪ್ರಸನ್ನ ಕುಮಾರ್‌ ಚಿತ್ತ?: ಪುಲಕೇಶಿನಗರ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಮಾಜಿ ಶಾಸಕ ಬಿ. ಪ್ರಸನ್ನಕುಮಾರ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಕಾರಣಕ್ಕೆ ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ ಏಳು ಶಾಸಕರನ್ನು ಜೆಡಿಎಸ್‌ನಿಂದ ಅಮಾನತು ಮಾಡಲಾಗಿತ್ತು. ಅವರು ಇತ್ತೀಚೆಗೆ ಕಾಂಗ್ರೆಸ್‌ ಸೇರಿದ್ದಾರೆ. ಅವರಿಗೆ ಟಿಕೆಟ್‌ ನೀಡಲು ಮುಖ್ಯಮಂತ್ರಿ ಆಸಕ್ತಿ ಹೊಂದಿದ್ದಾರೆ. ಟಿಕೆಟ್‌ಗಾಗಿ ಪ್ರಸನ್ನ ಕುಮಾರ್‌ ಪಟ್ಟು ಹಿಡಿದಿದ್ದಾರೆ. ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಅವರು ಜೆಡಿಎಸ್‌ನತ್ತ ಮುಖ ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಜೆಡಿಎಸ್‌ ವರಿಷ್ಠರ ಜತೆಗೆ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಯಲಹಂಕದಲ್ಲಿ ಶಾಸಕರಾಗಿದ್ದ ಪ್ರಸನ್ನಕುಮಾರ್ ಕ್ಷೇತ್ರ ಪುನರ್‌ ವಿಂಗಡಣೆ ನಂತರ ಪುಲಕೇಶಿನಗರದಿಂದ ಒಮ್ಮೆ ಆಯ್ಕೆಯಾಗಿದ್ದರು. ಕಳೆದ ಸಲ ಅಖಂಡ ಎದುರು ಸೋತಿದ್ದರು.

ಚಾಮರಾಜಪೇಟೆಯಲ್ಲಿ ಅದಲು ಬದಲು: ಇಲ್ಲಿ ಜಮೀರ್ ಅಹ್ಮದ್‌ ಖಾನ್‌ ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಕಾಂಗ್ರೆಸ್‌ನಲ್ಲಿದ್ದ ಅಲ್ತಾಫ್‌ ಖಾನ್‌ ಜೆಡಿಎಸ್‌ಗೆ ಜಿಗಿದಿದ್ದಾರೆ. 30 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದ ಅಲ್ತಾಫ್‌ ಸೂಕ್ತ ಸ್ಥಾನಮಾನ ಸಿಗದ ಕಾರಣ ಅಸಮಾಧಾನಗೊಂಡಿದ್ದರು. ಈಗ ಅವರು ಜೆಡಿಎಸ್‌ ಅಭ್ಯರ್ಥಿ. ಬಿರುಸಿನ ಪ್ರಚಾರವನ್ನೂ ಆರಂಭಿಸಿದ್ದಾರೆ. 

ಮಹದೇವಪುರದಲ್ಲೂ ಕಗ್ಗಂಟು: ಕಳೆದ ಚುನಾವಣೆಯಲ್ಲಿ ಮಹದೇವಪುರದಲ್ಲಿ ಬಿಜೆಪಿಯ ಅರವಿಂದ ಲಿಂಬಾವಳಿ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದ ಎ.ಸಿ. ಶ್ರೀನಿವಾಸ್‌ ಈ ಸಲವೂ ಟಿಕೆಟ್‌ ಆಕಾಂಕ್ಷಿ. ಪಕ್ಷ ಸಂಘಟನೆಯಲ್ಲಿ ತೊಡಗಿ ಭೂಮಿಕೆ ಸಿದ್ಧಪಡಿಸುತ್ತಿದ್ದಾರೆ. ಸೀರೆ, ಕುಕ್ಕರ್‌ ಹಂಚುವ ಮೂಲಕ ಮತದಾರರ ಮನ ಗೆಲ್ಲುವ ಯತ್ನ ನಡೆಸಿದ್ದಾರೆ. ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎಂ. ವೀರಪ್ಪ ಮೊಯಿಲಿ ಹಾಗೂ ಸಚಿವ ಡಾ.ಎಚ್.ಸಿ. ಮಹದೇವಪ್ಪ ನಡುವೆ ಜಟಾ‍‍ಪಟಿ ನಡೆದಿತ್ತು. ಸಭೆಯಲ್ಲಿ ಶ್ರೀನಿವಾಸ್‌ ಹೆಸರನ್ನು ಮೊಯಿಲಿ ಪ್ರಸ್ತಾಪಿಸಿದ್ದರು. ಚಲವಾದಿ ನಾರಾಯಣಸ್ವಾಮಿ ಹೆಸರನ್ನು ಮಹದೇವಪ್ಪ ಹೇಳಿದ್ದರು. ನಲ್ಲೂರಳ್ಳಿ ನಾಗೇಶ್‌ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

2013ರ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ನಲ್ಲೂರಳ್ಳಿ ನಾಗೇಶ್‌ ಸ್ಪರ್ಧಿಸಿದ್ದರು. ಈ ಕಾರಣಕ್ಕೆ, ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷ ಅವಧಿಗೆ ಅವರನ್ನು ಅಮಾನತು ಮಾಡಲಾಗಿತ್ತು. ವರ್ಷದ ಹಿಂದೆ ಅದನ್ನು ಹಿಂದಕ್ಕೆ ಪಡೆಯಲಾಗಿತ್ತು.

ಜಯನಗರದಲ್ಲಿ ಅವಕಾಶ ಯಾರಿಗೆ: ಪುತ್ರಿ ಸೌಮ್ಯಾ ರೆಡ್ಡಿಯನ್ನು ಜಯನಗರ ಕ್ಷೇತ್ರದಿಂದ ಕಣಕ್ಕಿಳಿಸಲು ಸಚಿವ ರಾಮಲಿಂಗಾರೆಡ್ಡಿ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಅದೇ ಕ್ಷೇತ್ರದಿಂದ ತಮ್ಮ ಮಗ ಮನ್ಸೂರ್‌ ಅಲಿ ಖಾನ್‌ಗೆ ಟಿಕೆಟ್‌ ಗಿಟ್ಟಿಸಿಕೊಳ್ಳಲು ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್‌ ಖಾನ್‌ ಬಯಸಿದ್ದಾರೆ. ಈ ಮಧ್ಯೆ, ಪಕ್ಷದ ‌ಹಿಂದುಳಿದ ವಿಭಾಗದ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್‌ಗೆ ಟಿಕೆಟ್‌ ಕೊಡಿಸಲು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಪ್ರಯತ್ನಿಸುತ್ತಿದ್ದಾರೆ ಎಂದೂ ಹೇಳಲಾಗಿದೆ.

**

‘ವಾಮಮಾರ್ಗದಿಂದ ಗೆಲುವು’

‘2013ರ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಎಚ್‌.ಸಿ. ಮಹದೇವಪ್ಪ ಅವರನ್ನು ವಾಮಮಾರ್ಗದ ಮೂಲಕ ಸಿದ್ದರಾಮಯ್ಯ ಗೆಲ್ಲಿಸಿದ್ದರು’ ಎಂದು ಪಿ. ರಮೇಶ್ ಗಂಭೀರ ಆರೋಪ ಮಾಡಿದರು.

‘ತಮ್ಮ ಸ್ವಾರ್ಥಕ್ಕಾಗಿ ಮಹದೇವಪ್ಪ ಅವರಿಗೆ ಕ್ಷೇತ್ರ ಬಿಟ್ಟುಕೊಡು ಎಂದು ಮುಖ್ಯಮಂತ್ರಿ ನನಗೆ ಹೇಳಿದ್ದರು. ಕಳೆದ ಚುನಾವಣೆಯಲ್ಲಿ ಜಿಲ್ಲಾಧಿಕಾರಿ ಮೂಲಕ 200 ಅಂಚೆ ಮತಗಳನ್ನು ಮಹದೇವಪ್ಪ ಅವರಿಗೆ ಸಿದ್ದರಾಮಯ್ಯ ಹಾಕಿಸಿದ್ದರು. ಈ ವಿಷಯವನ್ನು ಮುಖ್ಯಮಂತ್ರಿಯವರೇ ನನ್ನ ಬಳಿ ಹೇಳಿದ್ದರು’ ಎಂದು ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಹೇಳಿದರು.

‘ನನಗೆ ಟಿಕೆಟ್ ಸಿಗುವುದಿಲ್ಲ ಎನ್ನುವುದು ನಾಲ್ಕು ತಿಂಗಳ ಹಿಂದೆಯೇ ಗೊತ್ತಾಗಿತ್ತು. ಸ್ವಂತ ಹಣ ವೆಚ್ಚ ಮಾಡಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ‌. ಕಾರ್ಯಕರ್ತರ ಜೊತೆ ಸೇರಿ ಪಕ್ಷ ಕಟ್ಟಿದ್ದೇನೆ. ಜನತಾದಳದಿಂದ ಉಚ್ಚಾಟನೆಗೊಂಡ ದಿನದಿಂದ ಆಪ್ತನಾಗಿ, ಸ್ನೇಹಿತನಾಗಿ, ಮಗನಾಗಿ ಸಿದ್ದರಾಮಯ್ಯ ಜೊತೆಗೇ ಇದ್ದೆ’ ಎಂದು ಹೇಳುತ್ತಾ ಭಾವುಕರಾಗಿ ಕಣ್ಣೀರಿಟ್ಟರು.

‘ಮಹದೇವಪ್ಪಗೆ ಕ್ಷೇತ್ರ ಬಿಟ್ಟುಕೊಡು, ನಿನ್ನನ್ನು ಎಂಎಲ್‌ಸಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ, ಕ್ಷೇತ್ರ ಬಿಡಲು ನಾನು ಒಪ್ಪಲಿಲ್ಲ.‌ ನನ್ನ ಮೇಲೆ ದೌರ್ಜನ್ಯ ಮಾಡಿದರು. ಕ್ಷೇತ್ರದಲ್ಲಿ ಪಕ್ಷ ಸೋತರೂ ಅಡ್ಡಿ ಇಲ್ಲ, ಟಿಕೆಟ್ ಕೊಡಲ್ಲ ಎಂದರು. ರಾಜ್ಯದಲ್ಲಿರುವುದು ಇಂದಿರಾ ಕಾಂಗ್ರೆಸ್ ಅಲ್ಲ, ಸಿದ್ದರಾಮಯ್ಯ ಕಾಂಗ್ರೆಸ್’ ಎಂದು ಟೀಕಿಸಿದರು.

**

ಪದ್ಮನಾಭನಗರ ಕ್ಷೇತ್ರ ಕಾರ್ಯಕರ್ತರಿಂದ ಪ್ರತಿಭಟನೆ

ಪದ್ಮನಾಭನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ. ಶ್ರೀನಿವಾಸ್‌ ಅವರಿಗೆ ಟಿಕೆಟ್‌ ನೀಡಬಾರದು ಎಂದು ಆಗ್ರಹಿಸಿ ಅಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಗುರಪ್ಪ ನಾಯ್ಡು ಅವರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

‘ಈ ಹಿಂದೆ ಬಿಜೆಪಿಯಲ್ಲಿದ್ದ ಶ್ರೀನಿವಾಸ್‌ ಅವರು ಅಶೋಕ್‌ ಅವರ ಚೇಲಾ. ಬಿಜೆಪಿ ಏಜೆಂಟ್‌ಗೆ ಟಿಕೆಟ್‌ ನೀಡಬಾರದು. ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ’ ಎಂದು ಎಚ್ಚರಿಸಿದರು.

‘ಬಿಜೆಪಿಯಿಂದ ತಿರಸ್ಕೃತಗೊಂಡಿರುವ ಶ್ರೀನಿವಾಸ್‌ ಅವರು ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದಾರೆ. ಆದರೂ, ಅವರಿಗೆ ಕಾಂಗ್ರೆಸ್‌ನಲ್ಲಿ ಮಣೆ ಹಾಕಲು ಮುಂದಾಗಿರುವುದು ಸರಿಯಲ್ಲ’ ಎಂದರು.

ಪದ್ಮನಾಭನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಮೋದ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

**

ಹನುಮಂತರಾಯಪ್ಪ ಉಚ್ಚಾಟನೆ

ಶಾಸಕ ಮುನಿರತ್ನ ಅವರಿಗೆ ಟಿಕೆಟ್‌ ನೀಡಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದ ಕಾಂಗ್ರೆಸ್‌ ಮುಖಂಡ ಹನುಮಂತರಾಯಪ್ಪ ಹಾಗೂ ಪಾಲಿಕೆ ಸದಸ್ಯೆ ಆಶಾ ಸುರೇಶ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಎಂ.ರಾಜ್‌ಕುಮಾರ್‌, ‘ಹನುಮಂತರಾಯಪ್ಪ ಪಕ್ಷಾಂತರಕ್ಕೆ ಹೆಸರಾದವರು. ಈ ಮೊದಲು ಕಾಂಗ್ರೆಸ್‌ನಿಂದ ಜನತಾದಳಕ್ಕೆ, ಅಲ್ಲಿಂದ ಮತ್ತೆ ಕಾಂಗ್ರೆಸ್‌ಗೆ ಸೇರಿದ್ದರು. ಅಧಿಕಾರ ಅನುಭವಿಸಿ ಈಗ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಶಾಸಕರ ಬಗ್ಗೆ ಬಹಿರಂಗ ಹೇಳಿಕೆ ನೀಡಿ ಮುಜುಗರ ಉಂಟು ಮಾಡುತ್ತಿದ್ದಾರೆ’ ಎಂದರು.

‘ಈ ಬಗ್ಗೆ ಸ್ಥಳೀಯ ಬ್ಲಾಕ್‌ ಅಧ್ಯಕ್ಷರು ಹಾಗೂ ಕಾರ್ಯಕರ್ತರು ದೂರು ಸಲ್ಲಿಸಿರುವುದರಿಂದ ಆಶಾ ಸುರೇಶ್‌ ಅವರನ್ನೂ ಅಮಾನತು ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT